ಲಘು ಯುದ್ಧ ವಿಮಾನದ ಮಾಹಿತಿ ಕದ್ದ ಆರೋಪ: ವಿದ್ಯಾರ್ಥಿ ಮೇಲಿನ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು, ಆ.16: ಲಘು ಯುದ್ಧ ವಿಮಾನದ ಮಾಹಿತಿ ಕದ್ದು ಡಾರ್ಕ್ ವೆಬ್ನಲ್ಲಿ ಮಾರಲು ಯತ್ನಿಸಿದ ಟೆಕ್ ವಿದ್ಯಾರ್ಥಿ ಮೇಲಿನ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಿವರಾಮಕೃಷ್ಣ ಎಂಬ ಟೆಕ್ ವಿದ್ಯಾರ್ಥಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಟರ್ನಿಯಾಗಿ ಸೇರಿದ್ದನು. ರಕ್ಷಣಾ ಇಲಾಖೆಯ ವಿಮಾನ ಅಭಿವೃದ್ಧಿ ಸಂಸ್ಥೆಯ ಅಡಿ ಲಘು ಯುದ್ಧ ವಿಮಾನದ ಕೋಡ್ ಅಭಿವೃದ್ಧಿಪಡಿಸುವ ವಿಭಾಗದಲ್ಲಿ ಕೆಲಸ ಮಾಡಿದ್ದನು. ಈ ವೇಳೆ ಯುದ್ಧ ವಿಮಾನದ ಮೂಲ ಕೋಡ್ ತಿಳಿದುಕೊಂಡಿದ್ದ ಈತ ಅದನ್ನು ಡಾರ್ಕ್ ವೆಬ್ ಮೂಲಕ ಮಾರಾಟ ಮಾಡಲು ಯತ್ನಿಸಿದ್ದನು.
ಆರಂಭದಲ್ಲಿ ಈ ಮಾಹಿತಿ ಡಾರ್ಕ್ ವೆಬ್ನಲ್ಲಿ ಹೇಗೆ ಸೋರಿಕೆಯಾಯಿತೆಂದು ಪತ್ತೆ ಹಚ್ಚಲು ಕಷ್ಟವಾಗಿತ್ತು. 18 ತಿಂಗಳ ನಂತರ ಇದರ ಹಿಂದೆ ಶಿವರಾಮಕೃಷ್ಣ ಎಂಬ ವಿದ್ಯಾರ್ಥಿಯ ಕೈವಾಡ ಇದ್ದದ್ದು ಪತ್ತೆಯಾಗಿತ್ತು. ಈ ವೇಳೆಗೆ ಆತ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ ಸಂಸ್ಥೆಯಲ್ಲಿ ಹಿರಿಯ ಟೆಕ್ನಿಕಲ್ ಅಧಿಕಾರಿ ಗ್ರೇಡ್-3 ಹುದ್ದೆಗೆ ಅರ್ಜಿ ಸಲ್ಲಿಸಿದ್ದನು. ಅಷ್ಟರಲ್ಲಿ ತನಿಖೆ ವೇಳೆ ಈತನ ಪಾತ್ರ ಪತ್ತೆಯಾಗಿ ಮಾರ್ಚ್ 19, 2022 ರಂದು ಬಂಧನಕ್ಕೊಳಗಾಗಿದ್ದನು.
ತನ್ನ ವಿರುದ್ಧದ ತನಿಖೆ ರದ್ದುಪಡಿಸಬೇಕೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಆದರೆ, ಹೈಕೋರ್ಟ್ ನ್ಯಾಯಪೀಠವು ಈತನ ಅರ್ಜಿಯನ್ನು ವಜಾಗೊಳಿಸಿದೆ.