ಬಜೆಟ್ನಲ್ಲಿ ಗೌರವಧನ ಹೆಚ್ಚಿಸಲು ಕ್ರಮದ ಭರವಸೆ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಧರಣಿ ಮುಂದೂಡಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಪ್ರೀಡಂಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದೂಡಲಾಗುತ್ತಿದೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಿಳಿಸಿದೆ.
ಮಂಗಳವಾರ ಫೆಡರೇಷನ್ ಪ್ರಕಟನೆ ಹೊರಡಿಸಿದ್ದು, ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬರುವ ರಾಜ್ಯ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು. ಹೀಗಾಗಿ ಧರಣಿಯನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಚುರಪಡಿಸಿದ ಆರನೇ ಗ್ಯಾರಂಟಿಯಾದ ಅಂಗನವಾಡಿ, ಬಿಸಿಯೂಟ, ಮತ್ತು ಆಶಾಕಾರ್ಯಕರ್ತೆಯರ ಗೌರವ ಸಂಭಾವನೆಯನ್ನು ಹೆಚ್ಚಿಸುವುದಾಗಿ ವಾಗ್ದಾನ ಮಾಡಲಾಗಿತ್ತು. ಆದರೆ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಆದರೂ ಭರವಸೆಯಂತೆ ಕ್ರಮ ವಹಿಸಿರಲಿಲ್ಲ. ಹೀಗಾಗಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಧರಣಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ ಖಂಡಿಸಿ ಹಿಡಿ ಶಾಪಹಾಕಿದ ಮಹಿಳೆಯರು
ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಜನವಿರೋಧಿಯಾಗಿದ್ದು, ದುಡಿಯುವ ವರ್ಗದ ಹಿತಕಾಪಾಡುವಂತಹ ಯಾವುದೇ ಪ್ರಸ್ತಾಪ ಮಾಡದಿರುವುದನ್ನು ಖಂಡಿಸಿ ಮಹಿಳೆಯರು ಪ್ರೀಡಂಪಾರ್ಕಿನಲ್ಲಿ ಹಿಡಿಶಾಪ ಹಾಕುವ ಮೂಲಕ ಪ್ರತಿಭಟಿಸಿದರು.