ರಾಜ್ಯದ ಮಂತ್ರಿಗಿಂತಲೂ ನಾನು ಶಕ್ತಿಶಾಲಿ, ನಾನು ಯಾರಿಗೂ ಅಂಜುವ ಮಗನಲ್ಲ : ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ : ‘ರಾಜ್ಯದ ಮಂತ್ರಿಗಿಂತಲೂ ನಾನು ಶಕ್ತಿಶಾಲಿ ಆಗಿದ್ದೇನೆ. ಹೀಗಾಗಿ ನಾನು ಯಾರಿಗೂ ಅಂಜುವ ಮಗನೂ ಅಲ್ಲ’ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನೀವು ಬರೀ ಮಂತ್ರಿ ಆಗಿ ಕುಯ್ ಕುಯ್ ಎನ್ನಬಹುದು. ಆದರೆ ನಾನು ಯಾರಿಗೂ ಅಂಜುವ ಮಗನಲ್ಲ. ಯತ್ನಾಳ್ ಅನ್ನುವಂತಹದ್ದು ಒಂದು ಶಕ್ತಿಯಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ನೆನಪು ಮಾಡಿಕೊಡುತ್ತೇನೆ' ಎಂದು ತಿರುಗೇಟು ನೀಡಿದರು.
ಪರಸ್ಪರ ಕಾಲೆಳೆದಾಟ: ‘ನಾನು ಕೇಂದ್ರದಲ್ಲಿಯೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈಗ ನಮ್ಮ ಕ್ಷೇತ್ರದ ಜನರಿಂದ ಶಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ರಾಜ್ಯದ ಮಂತ್ರಿಗಳಿಗಿಂತ ಪವರ್ ಫುಲ್' ಎಂದು ಯತ್ನಾಳ್ ಹೇಳಿಕೊಂಡರು. ಇದಕ್ಕೆ ಆಕ್ಷೇಪಿಸಿದ ಸಚಿವ ಎಂ.ಬಿ.ಪಾಟೀಲ್, ‘ಈ ವೇಳೆ ನೀವು ಮಂತ್ರಿಯಾಗಿಲ್ಲವಲ್ಲ, ನಿಮ್ಮನ್ನು ನಿಮ್ಮ(ಬಿಜೆಪಿ) ಪಕ್ಷದವರು ಮಂತ್ರಿ ಮಾಡಿಲ್ಲವಲ್ಲ ಎಂದು ಸಚಿವ ಎಂ.ಬಿ.ಪಾಟೀಲ್, ಯತ್ನಾಳ್ ಕಾಲೆಳೆದರು.
ಅನ್ಯಾಯ: ಈ ಸರಕಾರದಲ್ಲಿ ಉತ್ತರ ಕರ್ನಾಟಕ ಭಾಗದವರು ನೀರಾವರಿ ಸಚಿವರು ಆಗಿಲ್ಲ. ಅದಕ್ಕಾಗಿ ನಮಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಭಾಗದವರನ್ನು ನೀರಾವರಿ ಸಚಿವರನ್ನಾಗಿ ಮಾಡಬೇಕೆಂದು ಎಂದು ಆಗ್ರಹಿಸಿದ ಯತ್ನಾಳ್, ಈ ಹಿಂದೆ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ ಸಚಿವರಾಗಿದ್ದಾಗ ಅವರಿಗೆ ಈ ಭಾಗದ ಯೋಜನೆಗಳ ಬಗ್ಗೆ ಕಳಕಳಿ ಇತ್ತು ಎಂದು ಉಲ್ಲೇಖಿಸಿ, ಪರೋಕ್ಷವಾಗಿ ಜಲಸಂಪನ್ಮೂಲ ಖಾತೆ ಹೊಂದಿರುವ ಡಿಕೆಶಿಗೆ ತಿರುಗೇಟು ನೀಡಿದರು.
ಝಮೀರ್ ಭೇಟಿ ಮಾಡಿದ್ದೇನೆ: ನಾನು ನಿನ್ನೆಯಷ್ಟೇ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ರನ್ನು ಭೇಟಿ ಮಾಡಿದ್ದು, ನನ್ನ ವೈಯಕ್ತಿಕ ವಿಚಾರಕ್ಕೆ ಅಲ್ಲ, ಬದಲಿಗೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳಿಗೆ ಅವರನ್ನು ಭೇಟಿ ಮಾಡಿದ್ದೇನೆ. ಅದನ್ನು ಹೊರತುಪಡಿಸಿದರೆ ಯಾವುದೇ ವೈಯಕ್ತಿಯ ವಿಚಾರಗಳನ್ನು ಚರ್ಚೆ ಮಾಡಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಆಶೋತ್ತರವನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆ' ಎಂದು ಯತ್ನಾಳ್ ಹೇಳಿದರು.