ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಬಗ್ಗೆ ಯಾವುದೇ ಚರ್ಚೆಯಿಲ್ಲ: ಬೊಮ್ಮಾಯಿ
"ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಬೇರೆ ವ್ಯಾಖ್ಯಾನ ನಡೆಯತ್ತಿರುವುದು ಅವರ ಪಕ್ಷದ ವಿಚಾರ"

ಬಸವರಾಜ ಬೊಮ್ಮಾಯಿ
ಬೆಂಗಳೂರು : ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಇಲ್ಲ. ರಾಜಕಾರಣದಲ್ಲಿ ಬೆಳವಣಿಗೆ ಕ್ಷೀಪ್ರವೇ ಆಗುವುದು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವರಾತ್ರಿ ನಿಮಿತ್ತ ಈಶಾ ಫೌಂಡೇಶನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಿಂದೆ ಭಾಗವಹಿಸಿದ್ದರು. ಅಮಿತ್ ಶಾ ಭಾಗಿಯಾಗಿದ್ದರು. ನಾವೂ ಸಾಕಷ್ಟು ಸಲ ಭಾಗಿಯಾಗಿವಹಿಸಿದ್ದೇವು. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಬೇರೆ ವ್ಯಾಖ್ಯಾನ ನಡೆಯತ್ತಿರುವುದು ಅವರ ಪಕ್ಷದ ವಿಚಾರ. ಅದು ಆ ಪಕ್ಷದ ಅಪನಂಬಿಕೆ ಮತ್ತು ಗೊಂದಲದ ಸಂಕೇತ. ಅಪನಂಬಿಕೆ ಇದೆ, ಅದಕ್ಕೆ ಅಪಸ್ವರ ಇದೆ. ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ಯಾವುದೇ ಚರ್ಚೆ ಇಲ್ಲ. ರಾಜಕಾರಣದಲ್ಲಿ ಬೆಳವಣಿಗೆ ಕ್ಷೀಪ್ರವೇ ಆಗುವುದು, ಓವರ್ ನೈಟ್ ಆಗುತ್ತದೆ. ಪ್ರಶ್ನೆ ಅದಲ್ಲ, ಆದರೆ, ನಮ್ಮ ತಿಳುವಳಿಕೆಯಲ್ಲಿ ಆ ರೀತಿ ಯಾವುದೇ ಸ್ಥಿತಿ ಇಲ್ಲ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ತೇಲಿಬಿಡಲಾಗುತ್ತಿದೆ. ಆದರೆ, ಎಲ್ಲರೂ ಒಟ್ಟಿಗೆ ಶಕ್ತಿಯಾಗಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಬೇಕು. ಎಲ್ಲರನ್ನೂ ಒಳಗೊಂಡಂತಹ ಸಂಘಟನೆ ಮಾಡುವ ಉದ್ದೇಶ ಇದೆ ಎಂದು ಅವರು ಹೇಳಿದರು.