ಮುಸ್ಲಿಮರದ್ದು ಕಾಂಟ್ರ್ಯಾಕ್ಟ್ ಮದುವೆ, ಹಿಂದೂಗಳ ರೀತಿ ಏಳೇಳು ಜನ್ಮದ ಅನುಬಂಧ ಅಲ್ಲ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ
ಬಸವರಾಜ್ ರಾಯರೆಡ್ಡಿ
ಕೊಪ್ಪಳ : ಮುಸ್ಲಿಮರ ಮದುವೆ ಕಾಂಟ್ರ್ಯಾಕ್ಟ್ ರೀತಿಯಲ್ಲಿ ಆಗುತ್ತದೆ, ಅವರ ಧರ್ಮ ಗುರುಗಳು ನೋಂದಣಿ ಪುಸ್ತಕದಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ. ಅವರಿಗೆ ಬೇಡ ಎಂದರೆ ಬಿಟ್ಟು ಬಿಡುತ್ತಾರೆ, ಅದರಲ್ಲೇನು ತಪ್ಪಿಲ್ಲ. ಅವರದ್ದು ಹಿಂದೂಗಳ ರೀತಿ ಏಳೇಳು ಜನ್ಮದ ಅನುಬಂಧ ಅಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ್ ರಾಯರೆಡ್ಡಿ ಅವರು ಹೇಳಿದರು.
ಓಬಿಸಿ ಮೀಸಲಾತಿ ತೆಗೆದು, ಮುಸ್ಲಿಮರಿಗೆ ನೀಡುತ್ತಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಪ್ರಧಾನಿ ಮೋದಿ ಗೊತ್ತಿದ್ದು ಮಾತನಾಡುತ್ತಾರೋ ಏನೋ ಗೊತ್ತಿಲ್ಲ. ಅವರು ಮಾತಾಡಿದ್ದು ತಪ್ಪು, ಮುಸ್ಲಿಮರ ಸ್ಥಿತಿ-ಗತಿ ತೀರಾ ಹೀನಾಯವಾಗಿದೆ ಎಂದು ಹೇಳಿದರು.
ಮಂತ್ರಿಗಳ ಕೈಯಲ್ಲಿ ಮಾತ್ರ ಗಣತಿ ವರದಿ ಇದೆ :
ಸಂಪುಟದಲ್ಲಿ ಚರ್ಚೆಯಾಗುವುದು ಜಾತಿ ಗಣತಿ ಅಲ್ಲ. ಅದು ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ-ಗತಿ ತಿಳಿಯುವ ಗಣತಿಯಾಗಿದೆ. 2015-16ರಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿಸಿದ್ದಾರೆ. ಇದು ಸ್ವಾಗತಾರ್ಹವಾಗಿದೆ. ಶಿಕ್ಷಕರು ಮನೆ-ಮನೆಗೆ ಹೋಗಿ ಗಣತಿ ಮಾಡಿದ್ದಾರೆ. ಶೇ.100 ಗಣತಿ ಆಗಲು ಸಾಧ್ಯವಿಲ್ಲ. ನಾನು ಕಳೆದ 1 ವರ್ಷದ ಹಿಂದೆ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದೇನೆ. ಸದ್ಯ 34 ಮಂತ್ರಿಗಳ ಕೈಯಲ್ಲಿ ಮಾತ್ರ ಗಣತಿ ವರದಿ ಇದೆ ಎಂದರು.
ಜಾತಿಗಣತಿಯನ್ನು ಬೇರೆ ಬೇರೆ ಕಾರಣಕ್ಕೆ ಬಿಜೆಪಿಯವರು ವಿರೋಧ ಮಾಡುತ್ತಾರೆ. ಲಿಂಗಾಯತ ಸಮಾಜದ ಶಾಸಕರು, ಸಚಿವರು ಮಾತ್ರವಲ್ಲದೇ ಎಲ್ಲಾ ಲಿಂಗಾಯತ ಮುಖಂಡರನ್ನೆಲ್ಲಾ ಕರೆದು ಮಾತನಾಡಿ ಎಂದು ಶಂಕರ್ ಬಿದರಿ ಅವರಿಗೆ ಹೇಳಿದ್ದೇವೆ ಎಂದರು.