ಸ್ಯಾಮ್ ಪಿತ್ರೋಡಾ ಸೇರಿ 6 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಸ್ಯಾಮ್ ಪಿತ್ರೋಡಾ
ಬೆಂಗಳೂರು: ರಾಜ್ಯ ಅರಣ್ಯ ಇಲಾಖೆಯ ಬಹುಕೋಟಿ ಮೌಲ್ಯದ ಸ್ವತ್ತನ್ನು ಕಾನೂನುಬಾಹಿರವಾಗಿ ಸ್ವಾಧೀನದಲ್ಲಿರಿಸಿಕೊಂಡಿರುವ ಆರೋಪದಡಿ ಕಾಂಗ್ರೆಸ್ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸೇರಿ ಆರು ಜನರ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದಾರೆ.
ಸೋಮವಾರ ನಗರದ ಲೋಕಾಯುಕ್ತ ಮುಖ್ಯ ಕಚೇರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ ಅವರು, ಸ್ಯಾಮ್ ಪಿತ್ರೋಡಾ, ಕರ್ನಾಟಕ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಝವೇದ್ ಅಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ.ಸಿಂಗ್ ಮತ್ತು ಸಂಜಯ್ ಮೋಹನ್, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರವೀಂದ್ರ ಕುಮಾರ್ ಮತ್ತು ಎಸ್.ಎಸ್.ರವಿಶಂಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ (ಸ್ಯಾಮ್ ಪಿತ್ರೋಡಾ) ಗಿಡಮೂಲಿಕೆ ಔಷಧಿ ಸಸಿಗಳ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯಕ್ಕೆಂದು 1996ರಲ್ಲಿ ಎಫ್ಆರ್ಎಲ್ಎಚ್ಟಿ ಸಂಸ್ಥೆಗೆ ಮೀಸಲು ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ನೀಡುವಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯ ಈ ಸಂಸ್ಥೆಗೆ ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಕಾವಲ್ನ ‘ಬಿ’ ಬ್ಲಾಕ್ನಲ್ಲಿ 5 ಹೆಕ್ಟೇರ್ (12.35 ಎಕರೆ) ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶವನ್ನು 5 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತ್ತು.
ಇದಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯೂ ಸಹ ಅನುಮೋದನೆ ನೀಡಿತ್ತು. ಎಫ್ಆರ್ಎಲ್ಎಚ್ಟಿ ಸಂಸ್ಥೆಗೆ ನೀಡಿದ್ದ 5 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯದ ನಂತರ (2001ರಲ್ಲಿ) ಮುಂದಿನ 10 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರೆಸಿ ಅರಣ್ಯ ಇಲಾಖೆಯು ಆದೇಶಿಸಿತ್ತು. 2001ರ ಆದೇಶದಂತೆ ಸ್ಯಾಮ್ ಪಿತ್ರೋಡಾ ಅವರ ಎಫ್ಆರ್ಎಲ್ಎಚ್ಟಿ ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ.
ಇದಾದ ನಂತರ ಅರಣ್ಯ ಇಲಾಖೆಯು ಎಫ್ಆರ್ಎಲ್ಎಚ್ಟಿ ಸಂಸ್ಥೆಯ ಗುತ್ತಿಗೆ ಅವಧಿಯನ್ನು ವಿಸ್ತರಿಸಿಲ್ಲ. ಆದರೂ ಸಹ 150 ಕೋಟಿ ರೂ.,ಗಳಿಗೂ ಹೆಚ್ಚು ಮೌಲ್ಯದ 12.35 ಎಕರೆ ವಿಸ್ತೀರ್ಣದದ ಸರಕಾರಿ ಸ್ವತ್ತನ್ನು ರಾಜ್ಯ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.