ಮೈಕ್ರೋ ಫೈನಾನ್ಸ್ ಕಿರುಕುಳ | ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ : ಗೃಹ ಸಚಿವ ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು : ʼಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ಬಂದಿದ್ದು, ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆʼ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಬ್ಯಾಂಕ್ ನಿಯಮಗಳ ಪ್ರಕಾರ ಸಾಲ ವಸೂಲಾತಿಗೆ ಕಾನೂನು ಇದೆ. ಆದರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಎದುರಿಸಲು ಸದ್ಯ ಇರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಎಂಬ ವರದಿ ಇದೆ. ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ. ಕಿರುಕುಳ ಆಗುತ್ತಿರುವುದನ್ನು ನಿಲ್ಲಿಸಲಾಗುತ್ತದೆʼ ಎಂದು ತಿಳಿಸಿದರು.
ʼಬ್ಯಾಂಕ್ಗಳಿಂದ ಸಾಲ ಪಡೆದಾಗ ಹಲವಾರು ಸಹಿ ಕಡೆ ಹಾಕಿಸಲಾಗುತ್ತದೆ. ಯಾಕೆ ಸಹಿ ಮಾಡುತ್ತೇವೆ ಎಂದು ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಇದರ ಆಧಾರದ ಮೇಲೆ ಮನೆ ರೇಡ್, ಸೀಝ್ ಮಾಡುತ್ತಾರೆ. ಕಾನೂನಿನಲ್ಲಿ ಪರಿಹಾರ ಕಂಡು ಹಿಡಿಯಬೇಕು. ಮುಖ್ಯಮಂತ್ರಿಗಳು ಸಭೆ ಕರೆಯುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವರದಿಯಾಗಿರುವ ಪ್ರಕರಣಗಳ ಬಗ್ಗೆ ಚರ್ಚೆ ನಡೆಸುತ್ತೇವೆʼ ಎಂದು ಹೇಳಿದರು.