ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಸರಕಾರದಿಂದ ಷಡ್ಯಂತ್ರ : ಎಚ್ಡಿಕೆ ಆರೋಪ
"ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ ಕಾಂಗ್ರೆಸ್"

ಎಚ್.ಡಿ.ಕುಮಾರಸ್ವಾಮಿ
ಹಾಸನ : ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲಾ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ, ಕರ್ನಾಟಕಕ್ಕೆ ಇಂತಹದ್ದು ಬೇಕು ಎಂದು ರಾಜ್ಯದಿಂದ ಯಾರೊಬ್ಬರೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದರು.
ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ನಾನು ಮೊದಲ ಸಹಿ ಹಾಕಿದ್ದೇ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು. 2011ರಲ್ಲಿ ಸಿದ್ದರಾಮಯ್ಯ ಅವರ ಸರಕಾರವೇ ಒಪ್ಪಿಗೆ ನೀಡಿದ್ದ ಸಂಡೂರಿನ ದೇವದಾರಿ ಗಣಿ ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು ಪಡೆಯಲು ಅನುಮತಿ ಕೊಡುವ ಬಗ್ಗೆ ನಾನು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಅದನ್ನೇ ತಿರುಚಿ ಹೇಳಿದ ಕಾಂಗ್ರೆಸ್ ನಾಯಕರು, ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ನನ್ನ ಒಳ್ಳೆಯ ಪ್ರಯತ್ನಕ್ಕೆ ವ್ಯವಸ್ಥಿತವಾಗಿ ಅಡ್ಡಿಪಡಿಸಿದರು ಎಂದು ದೂರಿದರು.
ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಏನೇನು ಷಡ್ಯಂತ್ರ ಮಾಡಬೇಕೋ ಎಲ್ಲವನ್ನೂ ಮಾಡಿತು ಎಂದು ಅವರು ನೇರ ಆರೋಪ ಮಾಡಿದರಲ್ಲದೆ, ದೇವದಾರಿ ಗಣಿ ಯೋಜನೆಗೆ ರಾಜ್ಯ ಸರಕಾರ ಅಡ್ಡಿಪಡಿಸಿದ ಕಾರಣದಿಂದ ಮಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರೆಲ್ಲರೂ ನನ್ನಲ್ಲಿ ಬಂದು ದುಃಖ ತೋಡಿಕೊಂಡರು. ನನ್ನ ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗೆ ಬೀಗ ಬೀಳಬಾರದು ಎಂಬ ಸದುದ್ದೇಶದಿಂದ ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC) ದಲ್ಲಿ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದ ರಾಜಕೀಯ ಪ್ರತಿಷ್ಠೆಯಿಂದ ಕೈಗಾರಿಕೆಗಳ ಕತ್ತು ಹಿಸುಕಲು ಪ್ರಯತ್ನ ಮಾಡುತ್ತಿದ್ದರೆ ನರೇಂದ್ರ ಮೋದಿ ಅವರ ಸರಕಾರ ಅವುಗಳಿಗೆ ಜೀವ ಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಎಚ್ಎಂಟಿ ವಿಷಯದಲ್ಲಿಯೂ ಅಡ್ಡಿ:
ಎಚ್ಎಂಟಿಗೆ ಜೀವ ಕೊಡಲು ನಾನು ಹೊರಟರೆ ಅದಕ್ಕೂ ರಾಜ್ಯ ಕಾಂಗ್ರೆಸ್ ಸರಕಾರ ಕೊಕ್ಕೆ ಹಾಕುತ್ತಿದೆ. ಅರಣ್ಯ ಇಲಾಖೆ ಭೂಮಿ ಅಂತ ಕಿತಾಪತಿ ಶುರು ಮಾಡಿದೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ಕೇವಲ ರಾಜಕೀಯ ಬೇಕಷ್ಟೇ. ಜನತೆಗೆ ಶಾಶ್ವತವಾಗಿ ಬದುಕು ರೂಪಿಸಿ ಕೊಡುವ ಉದ್ದೇಶ ಇಲ್ಲ. ಕೇವಲ ಚುನಾವಣೆ ರಾಜಕೀಯಕ್ಕಾಗಿ ಶಾಶ್ವತ ಅಭಿವೃದ್ಧಿಯನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮುಂದೆ ಏನನ್ನೂ ಚರ್ಚೆ ಮಾಡದೇ ಬಜೆಟ್ನಲ್ಲಿ ಏನನ್ನು ಕೊಟ್ಟಿಲ್ಲ ಎಂದು ಈಗ ಹುಯಿಲೆಬ್ಬಿಸಿದರೆ ಉಪಯೋಗವೇನು? ಪ್ರಸ್ತಾವನೆಗಳನ್ನು ತಂದು ಕೊಡುವುದು ಬಿಟ್ಟು ಪ್ರಧಾನಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದರೆ ಹೇಗೆ? ನನಗೆ ಕನ್ನಡಿಗರು ಕೊಟ್ಟಿರುವ ಶಕ್ತಿಯಿಂದಲೇ ವೈಜಾಗ್ ಸ್ಟೀಲ್ ಕಾರ್ಖಾನೆಯನ್ನು ಉಳಿಸುವುದು ಸಾಧ್ಯವಾಯಿತು. ಅದಕ್ಕೆ ಮೋದಿ ಅವರು ಕೊಟ್ಟ ಸಹಕಾರವನ್ನು ನಾನೆಂದೂ ಮರೆಯಲಾರೆ ಎಂದು ಸಚಿವರು ಹೇಳಿದರು.
ಭದ್ರಾವತಿ ಕಾರ್ಖಾನೆಗೂ ಮರುಜೀವ:
ಇದೇ ಹುರುಪಿನಲ್ಲಿ ಭದ್ರಾವತಿಯಲ್ಲಿ ಮೈಸೂರು ಮಹಾರಾಜರು ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರು ಕಟ್ಟಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಮುಚ್ಚಿ ಹೋಗಿದೆ. ಅದಕ್ಕೆ ಮರು ಜೀವ ಪ್ರಯತ್ನಕ್ಕೂ ಕೈ ಹಾಕಿದ್ದೇನೆ. ಅದಕ್ಕೆ ಈ ಕಾಂಗ್ರೆಸ್ ಸರಕಾರ ಎಷ್ಟರಮಟ್ಟಿಗೆ ನನಗೆ ಬೆಂಬಲ ಕೊಡುತ್ತೋ, ಬಿಡುತ್ತೋ ಗೊತ್ತಿಲ್ಲ. ಈಚೆಗೆ ಜಾರ್ಖಂಡ್ ರಾಜ್ಯದ ಬೋಕಾರೋ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿ ವಿಸ್ತರಣಾ ಯೋಜನೆಗೆ 20,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಬೇರೆ ರಾಜ್ಯ ರಾಜ್ಯಗಳಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೋದರೆ ಅಲ್ಲಿನ ನಾಯಕರು ಪಕ್ಷಾತೀತವಾಗಿ ಸಹಕಾರ ಕೊಡುತ್ತಾರೆ. ನಮ್ಮವರಿಗೆ ಏನಾಗಿದೆ? ಕುಮಾರಸ್ವಾಮಿ ಕರ್ನಾಟಕಕ್ಕೆ ಬರುತ್ತಾನೆ ಎಂದರೆ ಇವರಿಗೆ ಹೊಟ್ಟೆನೋವು ಆಗುತ್ತದೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ಬಜೆಟ್ ಟೀಕಿಸುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ:
ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಏನು ಮಾಡಿದೆ ಎನ್ನುವುದು ಗೊತ್ತಿದೆ. ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುವುದಕ್ಕೆ ಕಾಂಗ್ರೆಸ್ನವರಿಗೆ ಏನು ನೈತಿಕತೆ ಇದೆ ಎಂದು ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರಲ್ಲದೆ, ವಿಕಸಿತ ಭಾರತ ಸಾಕಾರಕ್ಕೆ ಸಮಗ್ರ ಆಯವ್ಯಯವನ್ನು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಎಲ್ಲಾ ರಾಜ್ಯಗಳಿಗೂ ಆದ್ಯತೆ ಕೊಟ್ಟಿದ್ದಾರೆ ಎಂದರು.