ಎಸ್ಸಿ, ಎಸ್ಟಿ ವ್ಯಕ್ತಿಗಳು ಕೈಗೊಳ್ಳುವ ಟೆಂಡರ್ ಕಾಮಗಾರಿಗಳ ಮೊತ್ತ 1 ಕೋಟಿ ರೂ.ಗೆ ಹೆಚ್ಚಳ
ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ ಅಂಗೀಕಾರ
ಬೆಂಗಳೂರು, ಜು.14: ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳಲಾದ ನಿರ್ಮಾಣ ಕಾಮಗಾರಿಗಳ ಮಟ್ಟವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ-2023 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಪರ್ಯಾಲೋಚಿಸಿ ಹಲವು ಸದಸ್ಯರು ಚರ್ಚಿಸಿದ ಬಳಿಕ ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು.
ಇದಕ್ಕೂ ಮೊದಲು ವಿಧೇಯಕ ಕುರಿತು ಪ್ರಸ್ತಾಪಿಸಿದ ಎಚ್.ಕೆ.ಪಾಟೀಲ್, ಎಸ್ ಆರ್ ದರ ಗಮನದಲ್ಲಿಟ್ಟುಕೊಂಡು ತಿದ್ದುಪಡಿ ತರಲಾಗಿದೆ. ಶೇ.62ರಷ್ಟು ಮೊದಲ ಟೆಂಡರ್ ನಲ್ಲಿ, ಶೇ.82ರಷ್ಟು 2ನೆ ಟೆಂಡರ್ ನಲ್ಲಿ ಎಸ್ಸಿ,ಎಸ್ಟಿ ಸಮುದಾಯದವರು ಭಾಗವಹಿಸಿದ್ದಾರೆ. ಇದು ಸಾಮಾಜಿಕ ನ್ಯಾಯ ಒದಗಿಸಲು ದೊಡ್ಡ ಅಸ್ತ್ರವಾಗಿದ್ದು, ಒಪ್ಪಿಗೆ ಸೂಚಿಸುವಂತೆ ಕೋರಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮ್ಮ ಪಕ್ಷದ ನಿಲುವು ಕೂಡ ತಿದ್ದುಪಡಿ ತರುವುದೇ ಆಗಿತ್ತು. ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಂತಾಗುತ್ತದೆ. ಶಿಕ್ಷಣ, ಉದ್ಯೋಗ ಸಬಲೀಕರಣದಲ್ಲಿ ಆ ಸಮುದಾಯಕ್ಕೆ ಆದ್ಯತೆ ಸಿಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಈ ತಿದ್ದುಪಡಿ ಅಗತ್ಯವಿತ್ತು. ಇದನ್ನು ಸ್ವಾಗತಿಸುತ್ತೇವೆ. ಆದರೆ, ಎಸ್ಸಿ,ಎಸ್ಟಿ ಸಮುದಾಯದವರ ಹೆಸರಿನಲ್ಲಿ ಬೇರೆಯವರು ಉಪ ಗುತ್ತಿಗೆ ಪಡೆದು ಕಾಮಗಾರಿ ನಿಲ್ಲಬೇಕು. ಅವರಿಗೆ ಯಂತ್ರೋಪಕರಣ ಕೊಡಿಸಬೇಕು ಎಂದರು.
ಕಾಂಗ್ರೆಸ್ ಶಾಸಕರಾದ ಶಿವಲಿಂಗೆಗೌಡ, ಬಿ.ಆರ್.ಪಾಟೀಲ್ ಸೇರಿದಂತೆ ಹಲವು ಸದಸ್ಯರು ಚರ್ಚಿಸಿದ ನಂತರ ಮಾತನಾಡಿದ ಎಚ್.ಕೆ ಪಾಟೀಲ್, ಮುಂಗಡ ಹಣ ಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಶಾಸಕರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು.
ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಅಂಗೀಕಾರ ಪಡೆಯಿತು.