ʼಕರ್ನಾಟಕದಲ್ಲಿ ಬಿಜೆಪಿ ಮುಕ್ತವಾಗಲಿದೆʼ ಎಂಬ ರೇಣುಕಾಚಾರ್ಯ ಅವರ ಹೇಳಿಕೆಗೆ ಯತ್ನಾಳ್ ಅಸಮಾಧಾನ
ಬೆಂಗಳೂರು, ಆ.30: ʼʼಪಕ್ಷದಲ್ಲಿ ಉಳಿದುಕೊಂಡು ನಾವು ಪಕ್ಷ ಬಿಡುತ್ತೇವೆ ಎಂದು ಬೆದರಿಕೆ ಹಾಕುವುದು ಒಳ್ಳೆಯದಲ್ಲ.ಈ ರೀತಿಯ ಹೇಳಿಕೆಗಳು ನಿಲ್ಲಬೇಕುʼʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಂದಿ ಪಕ್ಷ ಬಿಡುವುದಾಗಿ ಬೆದರಿಕೆ ಹಾಕುವುದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೇವೆ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಗಿದೆಯಾ?. ಆದರೆ, ನಮಗೆ 5 ವರ್ಷಗಳ ಕಾಲ ಜನತೆ ವಿರಾಮ ನೀಡಿದ್ದಾರೆ.ಆದರೂ, ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎಂಬುದು ಸುಳ್ಳು, ಅವರು ಪಕ್ಷ ಬಿಡುವುದಿಲ್ಲ. ಆದರೆ ಅವರ ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಒಳ್ಳೆಯದಿನ ಬರುತ್ತದೆ. ಇನ್ನೂ, ರೇಣುಕಾಚಾರ್ಯ ಅವರು ಲೋಕಸಭಾ ಟಿಕೆಟ್ ಕೇಳುವುದು ಯಾವುದೇ ತಪ್ಪಿಲ್ಲ ಎಂದ ಅವರು, ಬಿಜೆಪಿ ಕಚೇರಿ ಪಕ್ಷ ಸಂಘಟನೆಗೆ ಇರುವುದು. ಅಲ್ಲಿ ಗಾಳಿ ಸುದ್ದಿಗಳು ಹಬ್ಬಿಸಲು ಜಾಗವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರಕಾರದ ನೂರು ದಿನದ ಸಾಧನೆ ಅಂದರೆ ಅದು ವರ್ಗಾವಣೆ ಮಾತ್ರ. ಅಭಿವೃದ್ಧಿ ಕೆಲಸ ಎಲ್ಲ ಸ್ಥಗಿತವಾಗಿದೆ. ನಮ್ಮ ಅಧಿಕಾರಾವಧಿಯಲ್ಲಿನ ಕೆಲಸಗಳನ್ನೆಲ್ಲಾ ಸ್ಥಗಿತ ಮಾಡಿದ್ದಾರೆ. ಎಲ್ಲರಿಗೂ ಉಚಿತ ಖಚಿತ ಎಂದು ಹೇಳಿ ಈಗ ನೂರಾರು ಷರತ್ತುಗಳನ್ನು ಹಾಕಿದ್ದಾರೆ. ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಜನರಿಗೆ ಸಿಗುವುದಿಲ್ಲ ಎಂದರು.