ಸಂವಿಧಾನ ರಕ್ಷಣೆಗೆ, ದೇಶದ ಐಕ್ಯತೆಗೆ ನಾವು ಹೋರಾಟ ಮಾಡಬೇಕು : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : "ದೇಶದ ಸಂವಿಧಾನ ರಕ್ಷಣೆ ಹಾಗೂ ಐಕ್ಯತೆಗೆ ನಾವು ಹೋರಾಟ ಮಾಡಬೇಕು" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ʼಸಂವಿಧಾನ ರಕ್ಷಣೆ ಹಾಗೂ ಸಂವಿಧಾನದ ಪ್ರಕಾರವಾಗಿ ನಡೆದುಕೊಳ್ಳುವುದು ಅತಿ ಮುಖ್ಯ. ಆದರೆ ಈಗಿರುವ ಕೇಂದ್ರ ಸರಕಾರ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತಿದೆ. ಇದರಿಂದ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು, ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಸಿಗುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ʼದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ಸಿಕ್ಕ ನಂತರ ನಮಗೆ ವಿಶೇಷವಾದ ಸ್ಥಾನಮಾನ ಸಿಕ್ಕಿದೆ. ಇದು ಅನೇಕರಿಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಮತ ಕೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಕೊಡುಗೆ. ಇವರ ಕೊಡುಗೆಯಿಂದ ನಾವು ಈ ದೇಶವನ್ನು ಸ್ವಾತಂತ್ರ್ಯವಾಗಿ ಉಳಿಸಿ, ದೇಶದ ಐಕ್ಯತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ದುಃಖದ ವಿಚಾರ ಎಂದರೆ, ಅಮಿತ್ ಶಾರಂತಹ ದೇಶದ ಪ್ರಮುಖ ನಾಯಕರು ಸಂವಿಧಾನವನ್ನು ಹಿಯ್ಯಾಳಿಸುತ್ತಿದ್ದಾರೆ. ಸಂವಿಧಾನ ರಚಿಸಿದವರ ಬಗ್ಗೆ ಟೀಕೆ ಮಾಡಿ ಅವರಿಗೆ ಅಗೌರವ ತೋರುತ್ತಿದ್ದಾರೆʼ ಎಂದು ಬೇಸರ ವ್ಯಕ್ತಪಡಿಸಿದರು.
ʼಮೋದಿ ಅವರು ತಮ್ಮ ಭಾಷಣದಲ್ಲಿ ದೇಶವನ್ನು ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ತರಲು ಶಕ್ತಿ ತುಂಬುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ದೇಶ 5ನೇ ಸ್ಥಾನದಿಂದ ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಯುಪಿಎ ಸರಕಾರದ ಶ್ರಮದಿಂದ ದೇಶವನ್ನು ಆರ್ಥಿಕವಾಗಿ ನಾಲ್ಕನೇ ಸ್ಥಾನಕ್ಕೆ ತರಲಾಗಿತ್ತು. ಆದರೆ ಈಗಿನ ಸರಕಾರಕ್ಕೆ ನಾಲ್ಕನೇ ಸ್ಥಾನಕ್ಕೆ ತರಲೂ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರ ದೇಶದ ಪ್ರಜೆಗಳನ್ನು ಬಹಳ ಹೀನಾಯವಾಗಿ ನೋಡುತ್ತಿದೆ. ಅತಿ ಶ್ರೀಮಂತರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಸರಕಾರ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಬಡವರನ್ನು ಕಡೆಗಣಿಸುತ್ತಿದೆ. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕೆ ಮಾಡಿರುವುದನ್ನು ಮೋದಿ ಅವರಾಗಲಿ, ಅವರ ಜತೆಗಿರುವವರಾಗಲಿ ಮಾಡುತ್ತಿಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕಾಗಿದೆʼ ಎಂದು ಹೇಳಿದರು.
ʼನಾಳೆ ಅಂಬೇಡ್ಕರ್ ಅವರ ಜನ್ಮಸ್ಥಳದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಭೆ ನಡೆಸುತ್ತಿದ್ದು, ನಾನು ಅದರಲ್ಲಿ ಭಾಗವಹಿಸುತ್ತಿದ್ದೇನೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ಮಾಡುತ್ತಿರುವ ತೊಂದರೆ, ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದರ ವಿರುದ್ಧ ಧ್ವನಿ ಎತ್ತಲಾಗುವುದುʼ ಎಂದು ತಿಳಿಸಿದರು.