ಮುನಿರತ್ನ ಪ್ರಕರಣದಲ್ಲಿ ಪ್ರಧಾನಿ, ಅಮಿತ್ ಶಾ ಏಕೆ ಮೌನ? : ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೇಕೆ ಒಕ್ಕಲಿಗರು ಹಾಗೂ ಮಹಿಳೆಯರಿಗೆ ಅಗೌರವ ತೋರಿರುವ ಬಿಜೆಪಿ ಶಾಸಕ ಮುನಿರತ್ನ ಅವರ ಧ್ವನಿ ಮುದ್ರಿಕೆ ಬಗ್ಗೆ ಮೌನವಾಗಿದ್ದಾರೆ ಎಂದು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದರು ಅವರು, “ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾರೇಕೆ ಒಕ್ಕಲಿಗರು ಹಾಗೂ ಮಹಿಳೆಯರಿಗೆ ಅಗೌರವ ತೋರಿರುವ ಬಿಜೆಪಿ ಶಾಸಕ ಮುನಿರತ್ನ ಅವರ ಧ್ವನಿ ಮುದ್ರಿಕೆ ಬಗ್ಗೆ ಮೌನವಾಗಿದ್ದಾರೆ? ಮಹಿಳೆಯರು ಹಾಗೂ ಸಮುದಾಯಗಳನ್ನು ಅಗೌರವಿಸುವುದು ಬಿಜೆಪಿಯ ಕಾರ್ಯಸೂಚಿ ಆಗಿರುವುದರಿಂದ, ಅವರು ಮೌನ ವಹಿಸಿದ್ದಾರೆಯೆ?" ಎಂದು ಪೋಸ್ಟ್ ಮಾಡಿದ್ದಾರೆ.
ಗುತ್ತಿಗೆದಾರರೊಬ್ಬರು ತನಗೆ ಜಾತಿ ನಿಂದನೆ ಮಾಡಲಾಗಿದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತರುವಂತೆ ವರ್ತಿಸಿದ್ದಾರೆ ಇತ್ಯಾದಿ ಆರೋಪಗಳಡಿ ದಾಖಲಿಸಿದ್ದ ಪ್ರಕರಣದ ಸಂಬಂಧ ಅವರನ್ನು ಬಂಧಿಸಲಾಗಿತ್ತು.
ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನಂ ನೆರೆಯ ಆಂಧ್ರಪ್ರದೇಶದ ಗಡಿಯನ್ನು ದಾಟಲು ಯತ್ನಿಸುವಾಗ, ಅವರನ್ನು ಸೆಪ್ಟೆಂಬರ್ 14ರಂದು ಕೋಲಾರದ ಬಳಿ ಬಂಧಿಸಲಾಗಿತ್ತು.
ಆ ಬಳಿಕ ಮಹಿಳೆಯೊಬ್ಬರು ಅತ್ಯಾಚಾರದ ಆರೋಪದಲ್ಲಿ ಮುನಿರತ್ನ ವಿರುದ್ಧ ದೂರು ದಾಖಲಿಸಿದ್ದರು. ಇದಲ್ಲದೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲುನಾಯಕರ್ ಕೂಡಾ ತನಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಈ ಸಂಬಂಧ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ದೌರ್ಜನ್ಯ ತಡೆ ಕಾಯ್ದೆ, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.