ಪಿಇಎಸ್ ವಿಶ್ವವಿದ್ಯಾಯದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ತಜ್ಞರ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ ಸರಕಾರ
ಬೆಂಗಳೂರು, ಆ.22: ಪಿಇಎಸ್ ವಿಶ್ವವಿದ್ಯಾಯಲದಲ್ಲಿ ಅಧ್ಯಯನ ಮಾಡುತ್ತಿದ್ದ ಆದಿತ್ಯ ಪ್ರಭು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನೀಡುವಂತೆ ರಾಜ್ಯ ಸರಕಾರವು ತಜ್ಞರ ಸಮಿತಿಯನ್ನು ನೇಮಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಯಕರ್ ಸಮಿತಿಯ ಅಧ್ಯಕ್ಷರಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಶ್ರೀನಿವಾಸ್ ಸಿ. ಬೆಂಗಳೂರು ವಿವಿಯ ಮನಃಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀನಿವಾಸ್ ಎಂ. ನಿಮಾನ್ಸ್ನ ಕ್ಲಿನಿಕಲ್ ಸೈಕೋಲಜಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕಿ ಡಾ. ವೀಣಾ ಸತ್ಯನಾರಾಯಣ ಸಮಿತಿಯ ಸದಸ್ಯರಾಗಿದ್ದಾರೆ.
ತನಿಖಾ ತಂಡವು ತಾನು ಅಗತ್ಯವೆಂದು ಪರಿಭಾವಿಸುವ ಯಾವುದೇ ವ್ಯಕ್ತಿಗಳೊಂದಿಗೆ ಸಮಾಲೋಚಿಸಿ ಮಾಹಿತಿಯನ್ನು ಪಡೆಯಬಹುದು. ತನಿಖೆಯಲ್ಲಿ ಪ್ರಕ್ರಿಯಾ ನಿಷ್ಪಕ್ಷತೆ ಹಾಗೂ ನೈಸರ್ಗಿಕ ನ್ಯಾಯವನ್ನು ಪಾಲಿಸಬೇಕು. ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಇರುವ ಶೈಕ್ಷಣಿಕ ಪರಿಸರಗಳ ಹಿನ್ನೆಲೆಯಲ್ಲಿ ಈ ರೀತಿಯ ದುರ್ಘಟನೆಗಳು ಪುನರಾವರ್ತನೆ ಆಗದಂತೆ ತಡೆಯಲು ಕೈಗೊಳ್ಳಬಹುದಾದ ಕ್ರಮ ಹಾಗೂ ಮಾರ್ಗದರ್ಶಿ ಸೂತಗ್ರಗಳ ಬಗ್ಗೆ ಸರಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ.