ಕಾನೂನು ಸುವ್ಯವಸ್ಥೆಯ ಗ್ಯಾರೆಂಟಿ ಎಲ್ಲಿದೆ? : ಆರ್.ಅಶೋಕ್
ʼಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಕೆಟ್ಟ ಸರಕಾರ ನಡೆಸುತ್ತೀರಿ’

ಆರ್.ಅಶೋಕ್
ಬೆಂಗಳೂರು : ‘ಕಾನೂನು ಸುವ್ಯವಸ್ಥೆಯ ಗ್ಯಾರೆಂಟಿ ಎಲ್ಲಿದೆ?’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಮಂಗಳವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಕೆ.ಆರ್.ಮಾರುಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ-ಸುಲಿಗೆ. ವಿಜಯಪುರದಲ್ಲಿ ಮೂವರು ಕೂಲಿ ಕಾರ್ಮಿಕರನ್ನು ಕಟ್ಟಿ ಹಾಕಿ ಅಮಾನವೀಯ ಹಲ್ಲೆ. ಬೀದರ್, ಮಂಗಳೂರು, ಚಿತ್ರದುರ್ಗ, ಮೈಸೂರು, ಆನೇಕಲ್, ಹುಬ್ಬಳ್ಳಿಯಲ್ಲಿ ಐದು ದಿನಗಳ ಅಂತರದಲ್ಲಿ ಒಟ್ಟು 6 ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು’ ಎಂದು ಉಲ್ಲೇಖಿಸಿದ್ದಾರೆ.
‘ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಜನಸಾಮಾನ್ಯರು ಭಯಭೀತರಾಗಿ ದಿನಕಳೆಯುವ ದುಸ್ಥಿತಿ ಬಂದಿದೆ. ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡುವ ವಾತಾವರಣ ಇಲ್ಲ. ಕುರ್ಚಿಗೆ ಅಂಟಿಕೊಂಡು ಇನ್ನೆಷ್ಟು ದಿನ ಇಂತಹ ಕೆಟ್ಟ ಸರಕಾರ ನಡೆಸುತ್ತೀರಿ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈ ದುರಾಡಳಿತದಿಂದ ರಾಜ್ಯದ ಜನತೆಗೆ ಮುಕ್ತಿ ನೀಡಿ’ ಎಂದು ಆರ್.ಅಶೋಕ್ ಹೇಳಿದ್ದಾರೆ.
‘ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರ ಕೇವಲ ಗುರುವಾರದ ಸರಕಾರವಾಗಿದ್ದು, ಸಂಪುಟ ಸಭೆ ನಡೆಯುವ ದಿನ ಮಾತ್ರ ಸಿಎಂ, ಸಚಿವರು, ಅಧಿಕಾರಿಗಳು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಸ್ಥಿತಿ ಹೀಗಿರುವಾಗ ಇನ್ನು ಬೇರೆ ಇಲಾಖೆಗಳ ಸಿಬ್ಬಂದಿಗಳು ತಾನೇ ಏನು ಮಾಡುತ್ತಾರೆ?. ಕೊಠಡಿಗೆ ಬೀಗ, ಸಿಬ್ಬಂದಿ ಗೈರು! ಇದು ಕಾಂಗ್ರೆಸ್ ಸರಕಾರದ ಹೊಸ ಘೋಷವಾಕ್ಯ’
-ಆರ್.ಅಶೋಕ್, ವಿಪಕ್ಷ ನಾಯಕ