ಕರೆಂಟ್ ಶಾಕ್, ಬಲವಾದ ಹೊಡೆತಗಳಿಂದ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಸಾವು : ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ
![ಕರೆಂಟ್ ಶಾಕ್, ಬಲವಾದ ಹೊಡೆತಗಳಿಂದ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಸಾವು : ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಕರೆಂಟ್ ಶಾಕ್, ಬಲವಾದ ಹೊಡೆತಗಳಿಂದ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಸಾವು : ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ](https://www.varthabharati.in/h-upload/2024/06/19/1272726-screenshot-2024-06-19-185107.webp)
ನಟ ದರ್ಶನ್/ಕೊಲೆಯಾದ ರೇಣುಕಾಸ್ವಾಮಿ
ಬೆಂಗಳೂರು: ‘ವಿದ್ಯುತ್ ಶಾಕ್ ಹಾಗೂ ಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ರೇಣುಕಾಸ್ವಾಮಿಯ ಸಾವು ಸಂಭವಿಸಿದೆ’ ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಹಾಜರುಪಡಿಸುವಾಗ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧಪಡಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ರೇಣುಕಾಸ್ವಾಮಿಯ ಸಾವಿಗೆ ವೈದ್ಯರು ನೀಡಿರುವ ಕಾರಣದ ಕುರಿತು ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಸಲ್ಲಿಸಿರುವ ವರದಿಯಲ್ಲಿ ಕರೆಂಟ್ ಶಾಕ್ ಹಾಗೂ ಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂಬ ಅಂಶವನ್ನು ವರದಿಯಲ್ಲಿ ವೈದ್ಯರು ದಾಖಲಿಸಿದ್ದಾರೆ.
ಪಟ್ಟಣಗೆರೆ ಶೆಡ್ ಭದ್ರತಾ ಸಿಬ್ಬಂದಿ ಹೇಳಿಕೆ ದಾಖಲು: ರೇಣುಕಾಸ್ವಾಮಿಯ ಹತ್ಯೆ ನಡೆದ ಪಟ್ಟಣಗೆರೆಯ ಶೆಡ್ನ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದ್ದ ಪೊಲೀಸರು ಸಿಆರ್ಪಿಸಿ- 164ರ ಅಡಿ ನ್ಯಾಯಾಲಯದಲ್ಲಿ ಆತನ ಹೇಳಿಕೆ ದಾಖಲಿಸಿದ್ದಾರೆ. ಹಿಂದಿ ಭಾಷೆ ಮಾತನಾಡುತ್ತಿದ್ದ ಭದ್ರತಾ ಸಿಬ್ಬಂದಿ ಹೇಳಿಕೆಯನ್ನು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ಸಹಾಯದಿಂದ ಭಾಷಾಂತರಿಸಲಾಗಿದ್ದು, ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ ಎಂಬ ಅಂಶವನ್ನು ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.