ಪಿಯುಸಿ ಪರೀಕ್ಷೆಯ ವೇಳೆ ಹಿಜಾಬ್ ಧರಿಸಲು ಅನುಮತಿ ಬಗ್ಗೆ ಪರಿಶೀಲನೆ: ಸಚಿವ ಡಾ. ಎಚ್. ಸಿ. ಮಹದೇವಪ್ಪ

ಸಚಿವ ಡಾ.ಎಚ್.ಸಿ.ಮಹದೇವಪ್ಪ
ಕಲಬುರಗಿ: ಪಿಯುಸಿ ಪರೀಕ್ಷೆಯ ವೇಳೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಲು ಸಾಂವಿಧಾನಿಕ ಅಂಶಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮ್ ಸಂಘಟನೆಗಳು ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿರುವುದನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ಯಾವ ಸಾಧ್ಯತೆಗಳಿವೆ, ಸಂವಿಧಾನದಲ್ಲಿ ಯಾವೆಲ್ಲಾ ಅವಕಾಶಗಳಿವೆ ಎಂಬುದನ್ನು ಪರಾಮರ್ಶಿಸಿ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ರಂಝಾನ್ನ ಅವಧಿಯಲ್ಲಿ ಇಫ್ತಾರ್ ನಲ್ಲಿ ಭಾಗವಹಿಸಲು ಮುಸ್ಲಿಮ್ ಸರಕಾರಿ ನೌಕರರಿಗೆ ಸಮಯದ ವಿನಾಯಿತಿ ನೀಡಬೇಕು ಎಂಬ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮಹದೇವಪ್ಪ ಹೇಳಿದರು.
ಪರಿಶಿಷ್ಟ ಪಂಗಡದ ಕೆಲ ಜಾತಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ತಳಿಶಾಸ್ತ್ರ ಅಧ್ಯಯನ ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟಿಲ್ಲ. ಪಂಚ ಗ್ಯಾರೆಂಟಿ ಯೋಜನೆಗಳು ಅಬಾಧಿತವಾಗಿ ಮುಂದುವರೆಯುತ್ತವೆ. ರಾಜಕೀಯ ಪಕ್ಷಗಳಲ್ಲಿ ಜಾತಿವಾರು ಸಮಾವೇಶಗಳು ನಿರಂತರ. ಕಾಂಗ್ರೆಸ್ನಲ್ಲಿ ದಲಿತರ ಸಭೆ ಮಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ಸಮಸ್ಯೆಗಳಿರುವವರೆಗೂ ಈ ರೀತಿಯ ಸಭೆ ಸಮಾರಂಭಗಳು ನಿರಂತರವಾಗಿ ನಡೆಯುತ್ತವೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ದಲಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಹೆಚ್ಚಿದೆ. ಡಾ.ಬಿ.ಆರ್.ಅಂಬೇಡ್ಕರ್ರವರು ದಲಿತರು ಅಧಿಕಾರದ ನಿರ್ಣಾಯಕ ಸ್ಥಾನದಲ್ಲಿರಬೇಕೆಂದು ಬಯಸಿದ್ದರು. ಪಕ್ಷ ನಿರ್ಣಯಿಸಿದಾಗ, ಜನ ಬಯಸಿದಾಗ ದಲಿತ ಮುಖ್ಯಮಂತ್ರಿ ಆಸೆ ಈಡೇರಲಿದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿಚಾರವಾಗಿ ಗಲಾಟೆಯಾಗಿರುವುದು ದುರದೃಷ್ಟಕರ. ಈಗಾಗಲೇ ಎರಡೂ ರಾಜ್ಯಗಳ ಗಡಿಗಳ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರವಾಗಿ ಪದೇಪದೇ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಾನು ಹೇಳಿದ ತಕ್ಷಣ ನಾಯಕತ್ವ ಬದಲಾಗುವುದಿಲ್ಲ:
‘ನಾನು ಹೇಳಿದ ತಕ್ಷಣ ನಾಯಕತ್ವ ಬದಲಾವಣೆಯಾಗುವುದಿಲ್ಲ. ಡಿ.ದೇವರಾಜ ಅರಸು ಹೆಚ್ಚುಕಾಲ ಮುಖ್ಯಮಂತ್ರಿಯಾಗಿದ್ದರು ಎಂಬ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುರಿಯಲಿದ್ದಾರೆ. ಹೈಕಮಾಂಡ್ ಈಗಾಗಲೇ ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಂಡರೆ ಅದರಲ್ಲಿ ಬದಲಾವಣೆಯ ಸಾಧ್ಯತೆ ಇಲ್ಲ’
-ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ