‘ಬಾಯಿ ಮುಚ್ಚಿಕೊಂಡಿರಿ’ ಎಂದ ಖರ್ಗೆ ಸಂದೇಶ ಅರ್ಥ ಮಾಡಿಕೊಳ್ಳಬೇಕು: ಶಾಸಕ ಟಿ.ಬಿ.ಜಯಚಂದ್ರ

ಟಿ.ಬಿ. ಜಯಚಂದ್ರ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಬಾಯಿ ಮುಚ್ಚಿಕೊಂಡು ಇರಿ’ ಎಂದಿದ್ದಾರೆ. ಅವರೇ ಹೈಕಮಾಂಡ್ ಆಗಿರುವುದರಿಂದ ಅವರ ಸಂದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಪಕ್ಷದ ನಾಯಕರು ಹೊಸದಿಲ್ಲಿಗೆ ಹೋಗುತ್ತಿರುವ ವಿಚಾರ ಮತ್ತು ಸಿಎಂ ಹಾಗೂ ಕೆಪಿಸಿಸಿ ಬದಲಾವಣೆ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಬಾಯಿ ಮುಚ್ಚಿಕೊಂಡು ಇರಿ ಅಂದರೆ ಸುಮ್ಮನಿರಬೇಕು. ಖರ್ಗೆ ಅವರ ಈ ಹೇಳಿಕೆಯು ಎಲ್ಲದಕ್ಕೂ ತೆರೆ ಎಳೆದಿದೆ ಎಂದರು.
ಖರ್ಗೆ ಅವರು ಕರ್ನಾಟಕದ ಬಗ್ಗೆ ಅಧ್ಯಕ್ಷರ ಬದಲಾವಣೆ ಕುರಿತು ಹೇಳಿಲ್ಲ. ಕೆ.ಎನ್.ರಾಜಣ್ಣ ಅವರ ವಿಚಾರದಲ್ಲಿ ನಾನೇನು ಹೇಳುವುದಿಲ್ಲ. ನಾವೆಲ್ಲ ಹಿರಿಯರು, ನಾವು ಅರ್ಥ ಮಾಡಿಕೊಳ್ಳಬೇಕು. ಪದೇ ಪದೇ ಎಲ್ಲದಕ್ಕೂ ಉತ್ತರ ಕೊಡಲು ಆಗುವುದಿಲ್ಲ ಎಂದು ಟಿ.ಬಿ.ಜಯಚಂದ್ರ ಹೇಳಿದರು.
ರಾಜಕಾರಣ ಒಂದೊಂದು ಸಂದರ್ಭದಲ್ಲಿಯೂ ಬದಲಾವಣೆ ಆಗುತ್ತಿರುತ್ತದೆ. ಆದರೆ, ಬಿಜೆಪಿಯವರು ನಮ್ಮ ಸಿಎಂ ಮೇಲೆ ಆರೋಪ ಮಾಡಿದ್ದಾರೆ. ಅಪಪ್ರಚಾರ ಮಾಡಿ, ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆದರೆ, ಈಗ ಸಿಎಂ ನಿರ್ದೋಷಿ ಎಂದು ತೀರ್ಪು ಬಂದಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಾಗಿಲ್ಲ. ಪಂಚಾಯತ್ ಚುನಾವಣೆ ಆಗಿಲ್ಲ. ಹೀಗಾಗಿ ನಾವು ಸ್ಥಳೀಯ ಆಡಳಿತದ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.