ಸೌಜನ್ಯ ಕೊಲೆ ಪ್ರಕರಣ: ಎಸ್ಐಟಿ ರಚಿಸಿ ಮರು ತನಿಖೆಗೆ ಒಳಪಡಿಸುವಂತೆ ಸಂಘಟನೆಗಳ ಒತ್ತಾಯ
ಬೆಂಗಳೂರು: ರಾಜ್ಯ ಸರಕಾರವು ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ವಿಶೇಷ ತನಿಖಾ ತಂಡ(ಸಿಟ್) ರಚಿಸಿ ನಿಷ್ಪಕ್ಷಪಾತವಾದ ಮರು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ 60ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಧರಣಿ ಕೈಗೊಂಡು ಆಗ್ರಹಿಸಿವೆ.
ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ‘ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಎಂತಹ ಸಮಾಜವನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಯೋಚಿಸದರೆ ದುಗುಡವಾಗುತ್ತದೆ. ಜನತೆ ಈಗಿರುವ ರಾಜ್ಯ ಸರಕಾರದ ಬಗ್ಗೆ ಅಪಾರವಾದ ಭರವಸೆ ಇಟ್ಟುಕೊಂಡಿದ್ದಾರೆ. ಅದನ್ನು ಉಳಿಸಿಕೊಳ್ಳುವಂತೆ ಸೌಜನ್ಯ ಪ್ರಕರಣದ ಅಪರಾಧಿಗಳನ್ನು ಹಿಡಿದು ಶಿಕ್ಷಿಸಬೇಕು. ಮನುಷ್ಯತ್ವದ ನೆಲೆಯಲ್ಲಿ ರಾಜ್ಯ ಸರಕಾರ ಆಲೋಚನೆ ಮಾಡಬೇಕು’ ಎಂದು ಒತ್ತಾಯಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ‘ನಾವು ಕಟ್ಟುವ ತೆರಿಗೆ ಹಣದಲ್ಲಿ ಸಂಬಳ ಪಡೆದು, ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವವರಿಗೆ ಧಿಕ್ಕಾರವಿರಲಿ. ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಿ, ಅಪರಾಧಿಗಳನ್ನು ರಕ್ಷಿಸುತ್ತಿರುವವರಿಗೆ ನಮ್ಮ ಹಿಡಿಶಾಪ ತಟ್ಟುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೌಜನ್ಯ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ‘ಪ್ರಕರಣದ ತನಿಖೆಯು ಲೋಪಗಳಿಂದ ಕೂಡಿದ್ದು, ಮರು ತನಿಖೆಗೆ ಅರ್ಹವಾಗಿದೆ’ ಎಂದು ಹೇಳಿದೆ. ಆದುದರಿಂದ ನ್ಯಾಯಾಲಯವೇ ಹೇಳುವಂತೆ ಪ್ರಕರಣವನ್ನು ಸಿಬಿಐ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿಲ್ಲ. ಹೀಗಾಗಿ, ಪ್ರಕರಣವನ್ನು ಎಸ್ಐಟಿ ಮೂಲಕ ಮರುತನಿಖೆ ನಡೆಸಬೇಕು’ ಎಂದು ಮಹೇಶ್ ಶೆಟ್ಟಿ ತಿಮರೋಡಿ ಒತ್ತಾಯಿಸಿದರು.
ಸಿಐಟಿಯು ಮುಖಂಡ ಪ್ರಕಾಶ್, ನಮ್ಮ ಅಳತೆಗೂ ಮೀರಿದ ಸಮಸ್ಯೆಗಳು ಸೌಜನ್ಯ ಪ್ರಕರಣವನ್ನು ಸುತ್ತುವರಿದಿವೆ ಎಂದು ಹೇಳಿದರು.
ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ‘ಸೌಜನ್ಯ ಪ್ರಕರಣದ ತನಿಖೆಯನ್ನು ನ್ಯಾಯಾಂಗದ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಸಮಾಜದಲ್ಲಿ ನಿರಪರಾಧಿಗಳಂತೆ ತಿರುಗಾಡುತ್ತಿರುವ ನೈಜ ಅಪರಾಧಿಗಳು ಮತ್ತು ಅವರ ರಕ್ಷಕರನ್ನು ಕೂಡಲೇ ವಿಚಾರಣೆಗೆ ಒಳಪಡಿಸಿ, ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಎನ್ಎಫ್ಐಡಬ್ಲ್ಯುನ ಎ.ಜ್ಯೋತಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರವಾದ, ಅಮಾನುಷವಾದ ಹಿಂಸೆ, ದೌರ್ಜನ್ಯಗಳ ಈ ಕಾಲದಲ್ಲಿ ಸರಕಾರಗಳು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಲ್ಲಿ ಬದುಕಿನ ಬಗ್ಗೆ, ಈ ರಾಜ್ಯದ ಸರಕಾರದ ಬಗ್ಗೆ ಭರವಸೆ ಮೂಡಿಸಬೇಕು. ಇಲ್ಲವಾದರೆ ಇಡೀ ಮಹಿಳಾ ಸಮೂಹ ಭರವಸೆಯೇ ಇಲ್ಲದೆ ತತ್ತರಿಸಿ ಹೋಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಧರಣಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಸ್ಟ್ಯಾನಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯ್ಕ್, ಹೋರಾಟಗಾರ್ತಿ ಅಕ್ಕೈಪದ್ಮಶಾಲಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.