ರಾಜ್ಯದ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಜನತೆ: ವಿಜಯೇಂದ್ರ
"ಕಾನೂನು- ಸುವ್ಯವಸ್ಥೆ ಸರಿಯಾಗಿದೆ ಎಂಬಂತೆ ಗೃಹ ಸಚಿವರು ಬಿಂಬಿಸುತ್ತಿದ್ದಾರೆ"

ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದ ಕಾನೂನು- ಸುವ್ಯವಸ್ಥೆ ಕುಸಿತದಿಂದ ಪೊಲೀಸ್ ವ್ಯವಸ್ಥೆ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊನ್ನಾವರದಲ್ಲಿ ಗೋವಿನ ರುಂಡ ಕತ್ತರಿಸಿ, ಅಮಾನುಷ-ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅದರ ಜೊತೆಗೇ ಬಿಜಾಪುರದಲ್ಲಿ ಹಾಡಹಗಲಲ್ಲೇ ವ್ಯಕ್ತಿಯನ್ನು ಥಳಿಸಿದ ಘಟನೆ ನಡೆದಿದೆ. ಈಚೆಗೆ ಚಾಮರಾಜಪೇಟೆಯಲ್ಲೂ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಡೆದಿತ್ತು. ಅದು ರಾಜ್ಯಾದ್ಯಂತ ಮಾತ್ರವಲ್ಲದೆ, ದೇಶಾದ್ಯಂತ ಸುದ್ದಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾನೂನು- ಸುವ್ಯವಸ್ಥೆ ಸರಿಯಾಗಿದೆ ಎಂಬಂತೆ ರಾಜ್ಯದ ಗೃಹ ಸಚಿವರು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಈ ಕಾಂಗ್ರೆಸ್ ಸರಕಾರವು ಎಲ್ಲೋ ಒಂದು ಕಡೆ ಈ ಥರ ಘಟನೆಗಳು ನಡೆದಾಗ ಮೃದು ಧೋರಣೆ ಅನುಸರಿಸುತ್ತದೆ. ದೇಶದ್ರೋಹಿಗಳು, ಹಿಂದೂ ವಿರೋಧಿ ಶಕ್ತಿಗಳು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಭಯವೇ ಇಲ್ಲವಾಗಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಗೃಹ ಸಚಿವರು ಎಚ್ಚತ್ತುಕೊಳ್ಳಬೇಕಿದೆ. ಒಂದೆಡೆ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಇನ್ನೊಂದೆಡೆ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ಕುರಿತು ಗೃಹ ಸಚಿವರು, ಮುಖ್ಯಮಂತ್ರಿಗಳು ಈಗಲಾದರೂ ಎಚ್ಚತ್ತುಕೊಳ್ಳಲಿ ಎಂದು ಒತ್ತಾಯಿಸಿದರು.
ಬಿಜೆಪಿ-ಜೆಡಿಎಸ್ನಿಂದ 30 ಜನ ಶಾಸಕರು ಕಾಂಗ್ರೆಸ್ಸಿಗೆ ಸೇರಲಿದ್ದಾರೆ ಎಂಬ ಎಂ.ಬಿ.ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮುಡಾ ವಿಚಾರದಲ್ಲಿನ ಬೆಳವಣಿಗೆಗಳು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗುವ ಕುರಿತ ಹಪಾಹಪಿ, ಇವರ ಗುದ್ದಾಟ, ಜಗ್ಗಾಟ ಬಹಿರಂಗವಾಗಿದೆ. ದಿನನಿತ್ಯ ಟಿವಿ, ಪತ್ರಿಕೆಗಳಲ್ಲಿ ಇದನ್ನು ನೋಡುತ್ತಿದ್ದೇವೆ. ಅದನ್ನು ಉಳಿಸಿಕೊಂಡರೆ ಸಾಕಾಗಿದೆ. ಅಭಿವೃದ್ಧಿಗೆ ಅನುದಾನವಿಲ್ಲದೇ ಆಡಳಿತ ಪಕ್ಷದ ಶಾಸಕರೇ ಪರದಾಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ-ಜೆಡಿಎಸ್ನಿಂದ ಶಾಸಕರನ್ನು ಅವರ ಪಕ್ಷಕ್ಕೆ ಕರೆದುಕೊಂಡು ಇವರೇನು ಕಡಿಯಲಿಕ್ಕಿದೆ ಎಂದು ಕೇಳಿದರು.
ಕಾಂಗ್ರೆಸ್ನವರು ಇರುವ ಶಾಸಕರನ್ನು ಉಳಿಸಿಕೊಳ್ಳಲಿ. ಅಭಿವೃದ್ಧಿ ಬಗ್ಗೆ ಗಮನ ಕೊಡಲಿ. ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಡಲಿ, 136 ಶಾಸಕರು ಈಗಾಗಲೇ ಆಡಳಿತ ಪಕ್ಷದಲ್ಲಿದ್ದು, ಇನ್ನು ಬಿಜೆಪಿ-ಜೆಡಿಎಸ್ನಿಂದ ಕರೆದುಕೊಂಡು ಏನು ಮಾಡಲಿದ್ದಾರೆ ಎಂದು ಪ್ರಶ್ನಿಸಿದರು.