ಅಂಬೇಡ್ಕರ್ ಮತ್ತು ಸಂಸ್ಕೃತ ಸಂಘಿಗಳ ಮತ್ತೊಂದು ಸುಳ್ಳು

ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಸತ್ಯವಾಗಿ ಬಿಡುತ್ತದೆ ಎಂಬ ಗೋಬೆಲ್ಸ್ ತತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಸಂಘ ಪರಿವಾರದವರು ಅಂಬೇಡ್ಕರ್ ಅವರನ್ನು ಹಿಂದುವೀಕರಿಸಲು ಕಳೆದ ಎರಡು ದಶಕಗಳಿಂದ ಹತ್ತಾರು ಸುಳ್ಳುಗಳನ್ನು ಹರಿಬಿಡುತ್ತಾ ಬಂದಿದ್ದಾರೆ.
ಅಂಬೇಡ್ಕರ್ ಅವರು ಭಗವಾಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿಯೂ, ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಯೂ ಮಾಡಬೇಕೆಂಬ ಸಂಘಪರಿವಾರದ ಆಗ್ರಹಕ್ಕೆ ಸಮ್ಮತಿಸಿದ್ದರು ಎಂಬ ಅಪಪ್ರಚಾರವೂ ಅದೇ ಕುತಂತ್ರದ ಭಾಗವಾಗಿದೆ. ಈಗ ಬಿಜೆಪಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯಲ್ಲಂತೂ ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರದ ತನಕ ಸಂಸ್ಕೃತವನ್ನು ಕಲಿಸಬೇಕೆಂಬ ಬ್ರಾಹ್ಮಣೀಯ ಹಿಂದೂ ಯೋಜನೆ ರೂಪಿಸಿರುವ ಬಿಜೆಪಿ ಸರಕಾರ ಆಗಾಗ ಅದಕ್ಕೆ ಅಂಬೇಡ್ಕರ್ ಅವರೂ ಸಂಸ್ಕೃತದ ಪರವಾಗಿದ್ದರು ಎಂಬ ಸುಳ್ಳನ್ನು ಬಳಸಿಕೊಳ್ಳುತ್ತಾ ಬಂದಿದೆ.
೨೦೧೬ರಲ್ಲಿ ಅಂಬೇಡ್ಕರ್ ಅವರ ಸಂಸ್ಕೃತ ಪ್ರೇಮದ ಬಗ್ಗೆ ಮತ್ತೊಮ್ಮೆ ಮುರಳಿ ಮನೋಹರ ಜೋಶಿಯವರು ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಶುರುವಿಟ್ಟುಕೊಂಡಿದ್ದರು. ೨೦೨೨ರಲ್ಲಿ ಅವರ ಮಾತುಗಳನ್ನೇ ಆಗಿನ ಮುಖ್ಯ ನ್ಯಾಯಾಧೀಶ ಹಾಗೂ ಹಾಲಿ ನಾಗಪುರ ವಾಸಿ ಬೋಬ್ಡೆಯವರು ಪುನರುಚ್ಚರಿಸಿದ್ದರು.
ಆದರೆ ರಾಷ್ಟ್ರ ಭಾಷೆ ಯಾವುದಿರಬೇಕೆಂಬ ಬಗ್ಗೆ ಅಂಬೇಡ್ಕರ್ ಅವರ ಅಭಿಪ್ರಾಯ ಏನಿತ್ತು?
ಸಂವಿಧಾನ ರಚನಾ ಸಭೆಯಲ್ಲಿ ಭಾಷಾ ನೀತಿಯ ಬಗ್ಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಮಾತ್ರ ‘ಅಂಬೇಡ್ಕರ್ ಮತ್ತು ಸಂಸ್ಕೃತ’ದ ಸಂಘಪರಿವಾರದ ಈ ಸುಳ್ಳುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ಸಂಸ್ಕೃತ ಮತ್ತು ಸಂವಿಧಾನ ಸಭೆ
ಕೆಲವು ಸತ್ಯಗಳು
ಆದರೆ ಚರ್ಚೆಗೆ ಹೋಗುವ ಮುನ್ನ ಕೆಲವು ಪ್ರಾಥಮಿಕ ವಾಸ್ತವಗಳನ್ನು ತಿಳಿಯೋಣ:
- ಸಂಸ್ಕೃತವನ್ನು ಭಾರತದ ಅಫಿಷಿಯಲ್ ಮತ್ತು ನ್ಯಾಷನಲ್ ಭಾಷೆಯಾಗಿ ಮುಂದಿಡಬೇಕೆಂಬ ತಿದ್ದುಪಡಿಯನ್ನು ಸಂವಿಧಾನ ರಚನಾ ಸಭೆಯ ಮುಂದಿಟ್ಟಿದ್ದು ಅಂಬೇಡ್ಕರ್ ಅಲ್ಲ
ಬದಲಿಗೆ ಬಂಗಾಳದಿಂದ ಆಯ್ಕೆಯಾಗಿದ್ದ ಸದಸ್ಯ ಲಕ್ಷ್ಮೀಕಾಂತ್ ಮೈತ್ರಾ ಅವರು.
ಅವರ ತಿದ್ದುಪಡಿಗೆ ೨೭ ಸಹ ಸದಸ್ಯರ ಅನುಮೋದನೆಯಿದ್ದದ್ದು ನಿಜ. ಅದರಲ್ಲಿ ಪ್ರಧಾನವಾದವರು ಅಂಬೇಡ್ಕರ್, ಟಿ.ಟಿ. ಕೃಷ್ಣಮಾಚಾರಿ, ಕೊಡಗಿನ ಪೂಣಚ್ಚ, ಮದ್ರಾಸ್ ಪ್ರಾಂತದ ದುರ್ಗಾಬಾಯಿ ಮತ್ತಿತರರು.
-ಆ ಮನವಿಗೆ ಸಹಿ ಮಾಡಿದ್ದವರಲ್ಲಿ ಮೈತ್ರಾ ಅವರನ್ನು ಹೊರತುಪಡಿಸಿ ಮಿಕ್ಕ ಯಾವೊಬ್ಬ ಸದಸ್ಯರು ಸಂಸ್ಕೃತವನ್ನು ಒಂದು ಅಧಿಕೃತ ಭಾಷೆಯಾಗಬಹುದು ಎಂದು ಯಾವತ್ತೂ ಒಪ್ಪಿದವರಲ್ಲ.
ಅವರಲ್ಲಿ ಕೆಲವರಿಗೆ ಇಂಗ್ಲಿಷೇ ಆಡಳಿತ ಭಾಷೆಯಾಗಿ ಮುಂದುವರಿಯಬೇಕು ಎಂದು ಅಭಿಪ್ರಾಯವಿದ್ದರೆ, ಅಂಬೇಡ್ಕರ್ ಅವರಿಗೆ ಹಿಂದಿಯೇ ಕೇಂದ್ರದ ಮತ್ತು ರಾಜ್ಯಗಳ ಆಡಳಿತ ಭಾಷೆಯಾಗಬೇಕು ಎನ್ನುವ ಅಭಿಪ್ರಾಯವಿತ್ತು.
-ಸಂವಿಧಾನ ಸಭೆಯಲ್ಲಿ ದೇಶದ ಅಫಿಷಿಯಲ್/ನ್ಯಾಷನಲ್ ಭಾಷೆ ಯಾವುದಿರಬೇಕು ಎಂಬ ಬಗ್ಗೆ ಮುಂದಿಡಲಾದ ಹಲವಾರು ತಿದ್ದುಪಡಿಗಳು ೧೯೪೯ರ ಸೆಪ್ಟಂಬರ್ ೧೨, ೧೩ ಮತ್ತು ೧೪ರಂದು ಸುದೀರ್ಘ ಚರ್ಚೆಗೊಳಪಟ್ಟಿತ್ತು.
ಅದರ ಭಾಗವಾಗಿ ಸೆಪ್ಟಂಬರ್ ೧೨ರಂದು ಲಕ್ಷ್ಮೀಕಾಂತ್ ಮೈತ್ರಾ ಸಹ ತಮ್ಮ ತಿದ್ದುಪಡಿಯನ್ನು ಪ್ರಸ್ತಾವಿಸಿದ್ದರು.
ಸಂಸ್ಕೃತ-ಸಂವಿಧಾನ ಸಭೆಯಿಂದ ತಿರಸ್ಕೃತ!
ಇನ್ನು ಆ ತಿದ್ದುಪಡಿಯ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳೇನು?
ತಿದ್ದುಪಡಿಗೆ ಸಹಿ ಹಾಕಿದ್ದ ಅಂಬೇಡ್ಕರ್ ಮತ್ತು ಇತರ ಸದಸ್ಯರು ಯಾವ ವಾದಗಳನ್ನು ಮಂಡಿಸಿದರು?
ಸೆಪ್ಟಂಬರ್ ೧೨ರಂದು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರಗಳು :
http://164.100.47.194/loksabha/writereaddata/cadebatefiles/C12091949.html
ಸೆಪ್ಟಂಬರ್ ೧೩ರಂದು ನಡೆದ ಚರ್ಚೆಗಳು:
http://164.100.47.194/loksabha/writereaddata/cadebatefiles/C13091949.html
ಸೆಪ್ಟಂಬರ್ ೧೪ರಂದು ನಡೆದ ಚರ್ಚೆಗಳು :
http://164.100.47.194/loksabha/writereaddata/cadebatefiles/C14091949.html
ವೆಬ್ ವಿಳಾಸದಲ್ಲಿ ಲಭ್ಯ.
ಪರ -ವಿರೋಧ ವಾದಗಳಲ್ಲಿ ಆಸಕ್ತಿಯಿರುವ ಎಲ್ಲರೂ ಗಮನಿಸಬಹುದು.
ಈ ತಿದ್ದುಪಡಿಯ ಬಗ್ಗೆ ಚರ್ಚೆ ಪ್ರಾರಂಭವಾದಾಗ ತಮ್ಮ ತಿದ್ದುಪಡಿಯನ್ನು ಮಂಡಿಸಲು ಮೈತ್ರಾ ಅವರು ಹಾಜರಿರಲಿಲ್ಲ!
ನಂತರ ಹಾಜರಾಗಿ ತಮ್ಮ ವಾದವನ್ನು ಮಂಡಿಸುತ್ತಾರೆ. ಅದರ ವಿವರಗಳು ಮೇಲಿನ ವೆಬ್ ವಿಳಾಸದಲ್ಲಿದೆ.
ಆದರೆ ಇಡೀ ಮೂರೂ ದಿನಗಳ ವಾದ-ವಿವಾದಗಳಲ್ಲಿ ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಮೈತ್ರಾ ಅವರ ತಿದ್ದುಪಡಿಯನ್ನು ಬೆಂಬಲಿಸಿದ್ದ ಯಾವ ಸದಸ್ಯರೂ ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡಬೇಕೆಂದು ಆಗ್ರಹಿಸುವುದಿಲ್ಲ.
ಮಾತನಾಡಿದ ದುರ್ಗಾಬಾಯಿಯಂಥವರು ಹಿಂದಿಗಿಂತ ಪರ್ಷಿಯನ್ ಮಿಶ್ರಿತ ಹಿಂದೂಸ್ಥಾನಿ ಹಾಗೂ ರೋಮನ್ ಅಂಕಿಗಳು ದೇಶಭಾಷೆಯಾಗಬೇಕೆಂದು ಅಭಿಪ್ರಾಯ ಪಡುತ್ತಾರೆ.
ಅವರ ಪ್ರಸ್ತಾವಕ್ಕೆ ನೈತಿಕ ಬೆಂಬಲ ನೀಡುವುದು ಭಾರತೀಯ ಜನತಾ ಪಕ್ಷದ ಹಿಂದಿನ ಅವತಾರವಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿಯವರು ಮಾತ್ರ. ಆದರೆ ಅವರು ಕೂಡಾ ‘‘ದೇಶದ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಭಾಷೆಯನ್ನೂ ‘ನ್ಯಾಷನಲ್’ ಅಫಿಷಿಯಲ್ ಭಾಷೆಯಾಗಿ ಬಲವಂತವಾಗಿ ಹೇರಲು ಬರುವುದಿಲ್ಲ’’ವೆಂದು ಸ್ಪಷ್ಟಪಡಿಸುತ್ತಾರೆ.
ಹಿಂದುತ್ವದ ಪರಮ ಪ್ರತಿಪಾದಕರಾಗಿದ್ದ ಪುರುಷೋತ್ತಮ್ ದಾಸ್ ಟಂಡನ್ ಅವರು ಕೂಡಾ ‘‘ಸಂಸ್ಕೃತವು ನ್ಯಾಷನಲ್/ಅಫಿಷಿಯಲ್ ಭಾಷೆಯಾಗುವುದು ಪ್ರಾಕ್ಟಿಕಲ್ ಅಲ್ಲ’’ ಎಂದೇ ಅಭಿಪ್ರಾಯ ಪಡುತ್ತಾರೆ.
ಹೀಗಾಗಿ ಸಂಸ್ಕೃತ ಭೂಯಿಷ್ಠ ಹಿಂದಿ ಭಾಷೆ ಆಡಳಿತ ಭಾಷೆಯಾಗಬೇಕೆಂಬುದು ಸಂವಿಧಾನ ರಚನಾ ಸಭೆಯಲ್ಲಿದ್ದ ಹಿಂದುತ್ವವಾದಿ ಒಲವಿದ್ದ ಎಲ್ಲರ ಅಭಿಪ್ರಾಯವಾಗಿತ್ತೇ ವಿನಾ ಸಂಸ್ಕೃತವೇ ದೇಶಭಾಷೆಯಾಗಬೇಕೆಂಬುದಲ್ಲ.
(ವಿವರಗಳಿಗೆ ಮೇಲಿನ ವೆಬ್ ವಿಳಾಸದಲ್ಲಿರುವ ಚರ್ಚೆಯನ್ನು ಓದಬಹುದು)
ಇಡೀ ಮೂರೂ ದಿನಗಳ ಚರ್ಚೆಯಲ್ಲಿ ಅಂಬೇಡ್ಕರ್ ಅವರು ಮಧ್ಯಪ್ರವೇಶ ಮಾಡುವುದು ಕೊನೆಯ ದಿನ- ಸೆಪ್ಟಂಬರ್ ೧೪ರಂದು ಮಾತ್ರ.!
ಅದು ಕೂಡಾ ಚರ್ಚೆಯ ವಸ್ತುವಿನ ಬಗ್ಗೆ ಅಲ್ಲ.
ಬದಲಿಗೆ ಚರ್ಚೆ ದೀರ್ಘವಾಗುತ್ತಿರುವುದರಿಂದ ಮುಗಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮಾವಳಿಗಳನ್ನು ಸ್ಪಷ್ಟಪಡಿಸಲು.
ಅದರಂತೆ ಮೂರು ದಿನಗಳ ಸತತ ಚರ್ಚೆಯ ನಂತರ ಸದನದಲ್ಲಿ ಒಂದು ಒಮ್ಮತ ಮೂಡಿರುವುದರಿಂದ ಚರ್ಚೆಯನ್ನು ಅಂತಿಮಗೊಳಿಸಿಕೊಳ್ಳಲು ಯಾರ್ಯಾರು ತಮ್ಮ ತಿದ್ದುಪಡಿಗಳನ್ನು ಹಿಂದೆಗೆದುಕೊಳ್ಳಲು ಇಷ್ಟಪಡುತ್ತಾರೋ ಅವರು ಮೊದಲು ಹಿಂಪಡೆಯಲು ಅವಕಾಶ ನೀಡಲಾಯಿತು.
ತಿದ್ದುಪಡಿಗಳನ್ನು ಹಿಂದೆಗೆದುಕೊಂಡವರಲ್ಲಿ ಮೊದಲಿಗರು ಸಂಸ್ಕೃತವನ್ನು ದೇಶಭಾಷೆ ಮಾಡಬೇಕೆಂದು ಪ್ರಸ್ತಾವ ಮಂಡಿಸಿದ್ದ ಲಕ್ಷ್ಮೀಕಾಂತ್ ಮೈತ್ರಾ ಅವರೇ ಆಗಿದ್ದರು!!!
ಹೀಗೆ, ಸಂಸ್ಕೃತವನ್ನು ಅಫಿಷಿಯಲ್ ಭಾಷೆ ಮಾಡಬೇಕೆಂಬ ಪ್ರಸ್ತಾವದ ಬಗ್ಗೆ ಅದನ್ನು ಮುಂದಿಟ್ಟ ಮೈತ್ರಾ ಅವರನ್ನು ಒಳಗೊಂಡಂತೆ ಅಂಬೇಡ್ಕರ್ ತನಕ ಯಾರು ಉತ್ಸಾಹಿಗಳಾಗಿರಲಿಲ್ಲ.
ಆದ್ದರಿಂದ ಅಂಬೇಡ್ಕರ್ ಅವರು ಸಂಸ್ಕೃತವನ್ನು ಅಫಿಷಿಯಲ್ ನ್ಯಾಷನಲ್ ಭಾಷೆಯನ್ನಾಗಿ ಮಾಡುವ ಅಭಿಪ್ರಾಯ ಹೊಂದಿದ್ದರು ಎಂಬ ಸಂಘಿಗಳ ಅಪಪ್ರಚಾರ ಅಕ್ಷರಶಃ ಸುಳ್ಳು ಮತ್ತು ಕುತಂತ್ರದ್ದು.
ಹಾಗಿದ್ದಲ್ಲಿ ಅಂಬೇಡ್ಕರ್ ಅವರು ಮೈತ್ರಾ ಅವರ ತಿದ್ದುಪಡಿಗೆ ಸಹಿ ಹಾಕಿದ್ದಾದರೂ ಏಕೆ?
ಅಂಬೇಡ್ಕರ್ ಅವರ ಭಾಷಾ ನೀತಿ ಮತ್ತು ಸಂವಿಧಾನ ಸಭೆಯ ಭಿನ್ನಮತ:
ಅಂಬೇಡ್ಕರ್ ಅವರು ದಲಿತರ ಮತ್ತು ಶೋಷಿತರ ಹಿತರಕ್ಷಣೆಯು ಬಲವಾದ ಕೇಂದ್ರ ಸರಕಾರದಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ಹೊಂದಿದ್ದರು. ಭಾಷಾವಾರು ಪ್ರಾಂತ ರಚನೆಗಳು ಕೂಡಾ ಆಯಾ ಪ್ರಾಂತಗಳ ಊಳಿಗಮಾನ್ಯ ಶಕ್ತಿಗಳ ಬಲವನ್ನು ಹೆಚ್ಚಿಸಿ ದಲಿತ ಹಾಗೂ ದಮನಿತ ಜನತೆಯ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ ಎನ್ನುವುದು ಅವರ ನಿಲುವಾಗಿತ್ತು.
ಆದ್ದರಿಂದಲೇ ಈ ದೇಶವು ಒಕ್ಕೂಟದ ಸ್ವರೂಪದ ಹೆಸರಿನಲ್ಲಿ ಮತ್ತೊಮ್ಮೆ ಊಳಿಗಮಾನ್ಯ ಶಕ್ತಿಗಳಿಗೆ ಬಲಿಯಾಗಬಾರದೆಂಬ ಕಾರಣದಿಂದ ದೇಶದ ಏಕತೆಗೆ ದೇಶಾದ್ಯಂತ ಹಿಂದಿಯನ್ನೇ ಆಡಳಿತ ಭಾಷೆಯನ್ನಾಗಿಸಬೇಕೆಂಬ ಅಭಿಪ್ರಾಯವನ್ನು ಒಮ್ಮೆ ವ್ಯಕ್ತಪಡಿಸಿದ್ದರು.
ಆದರೆ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದಿದ್ದ ಅಂಬೇಡ್ಕರ್ ಅವರು ಸಂಸ್ಕೃತಕ್ಕೆ ರಾಜ್ಯಾಧಿಕಾರ ಸಿಗುವುದೆಂದರೆ ಮತ್ತೊಮ್ಮೆ ಈ ದೇಶದ ಬಹುಸಂಖ್ಯಾತ ದಲಿತ-ದಮನಿತರ ಭಾಷಿಕ ದಾಸ್ಯವೆಂದು ಖಚಿತ ನಿಲುವನ್ನು ಹೊಂದಿದ್ದರು. ಹೀಗಾಗಿ ಸಂವಿಧಾನ ರಚನಾ ಸಭೆಯ ಒಳಗೆ ಮತ್ತು ಹೊರಗೆ ಉದ್ದಕ್ಕೂ ಈ ದೇಶದ ಬ್ರಾಹ್ಮಣ್ಯ, ಸಂಸ್ಕೃತ ಯಾಜಮಾನ್ಯ ವಂಚನೆ,ಇತ್ಯಾದಿಗಳ ವಿರುದ್ಧ ನಿರಂತರ ಹೋರಾಟವನ್ನೇ ಮಾಡಿಕೊಂಡು ಬಂದಿದ್ದರು.
ಆದ್ದರಿಂದ ಅಂಬೇಡ್ಕರ್ ಅವರು ಸಂಸ್ಕೃತವನ್ನು ದೇಶಾಡಳಿತ ಭಾಷೆಯಾಗಿ ಪ್ರಸ್ತಾವಿಸುವ ಸಾಧ್ಯತೆಯೇ ಇರಲಿಲ್ಲ. ಆದರೂ ಅವರು ಮೈತ್ರಾ ಅವರ ಬಿನ್ನಹಕ್ಕೆ ಯಾಕೆ ಸಹಿ ಹಾಕಿದರು? ಅಂಬೇಡ್ಕರ್ ಅವರು ಕೂಡಾ ನಂತರ ದಾಖಲಿಸಿರುವಂತೆ ಇಡೀ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅತ್ಯಂತ ತಲೆನೋವಾಗಿ ಪರಿಣಮಿಸಿದ್ದು ಭಾಷಾ ನೀತಿಯ ವಿಷಯವೇ ಆಗಿತ್ತು.
ಮಿಕ್ಕೆಲ್ಲಾ ವಿಷಯದಲ್ಲಿ ಎಷ್ಟೇ ಏಕತೆ ಪ್ರದರ್ಶನಗೊಂಡಿದ್ದರೂ ದೇಶದ ಅಧಿಕೃತ ಆಡಳಿತ ಭಾಷೆ ಯಾವುದಾಗಬೇಕು ಎನ್ನುವ ಚರ್ಚೆ ಸಂವಿಧಾನ ಸಭೆಯನ್ನು ಅಡ್ಡಡ್ಡ-ಉದ್ದುದ್ದ ಸೀಳಿತ್ತು. ಅದು ಸಹಜವೂ ಆಗಿತ್ತು.
ಭಾರತವು ಬಹುಸಂಖ್ಯಾತ ಹಾಗೂ ಬಹುಧರ್ಮೀಯ ದೇಶವಾಗಿದ್ದರಿಂದ ದೇಶಕ್ಕೊಂದೇ ಆಡಳಿತ ಭಾಷೆಯೆಂಬ ವಿಷಯವನ್ನು ಸೂಕ್ಷ್ಮವಾಗಿ ಹಾಗೂ ಪ್ರಜಾತಾಂತ್ರಿಕವಾಗಿ ಬಗೆಹರಿಸುವ ಅಗತ್ಯವಿತ್ತು.
ಆದರೆ ಅಂಥ ಒಂದು ಸಾಧ್ಯತೆಯೂ ಸೀಮಿತವಾಗಿದ್ದರಿಂದ ಈ ವಿಷಯದಲ್ಲಿ ಉತ್ತರ-ದಕ್ಷಿಣ, ಹಿಂದಿ-ಹಿಂದಿಯೇತರ, ಹಿಂದಿ-ಹಿಂದೂಸ್ಥಾನಿ, ಸಂಸ್ಕೃತ ಪ್ರಭಾವಿಹಿಂದಿ- ಪರ್ಶಿಯನ್ ಪ್ರಭಾವಿ ಹಿಂದಿ... ಇನ್ನಿತ್ಯಾದಿ ವೈರುಧ್ಯಗಳು ಮುಗಿಯದ ಚರ್ಚೆಯನ್ನು ಹುಟ್ಟುಹಾಕಿದ್ದವು. ಇದು ಹಲವು ಬಗೆಯ ಹತಾಶೆಗೂ ಕಾರಣವಾಗಿತ್ತು.
ಸರ್ವರಿಗೂ ಸಮಾನ ಅನನುಕೂಲದ ಸಂಸ್ಕೃತ!
ಇಂತಹ ಹತಾಶೆಯೇ ಕೆಲವರಲ್ಲಿ ಸಂಸ್ಕೃತವೇ ಅಧಿಕೃತ ಭಾಷೆಯಾಗಿ ಬಿಡಲಿ ಎಂಬ ಹತಾಶ-ಸಿನಿಕ ಪ್ರತಿಪಾದನೆಗೂ ಕಾರಣವಾಗಿತ್ತು, ಅಂಬೇಡ್ಕರ್ ಅವರ ಲೆಕ್ಕಾಚಾರದ ಸಹಿಗೂ ಅದೇ ಕಾರಣವಾಗಿತ್ತು..
ಉದಾಹರಣೆಗೆ ಈ ಮುಗಿಯದ ಚರ್ಚೆಯನ್ನು ಕಂಡು ನಝೀರುದ್ದೀನ್ ಅಹ್ಮದ್ ಎಂಬ ಸದಸ್ಯರು ಸಂಸ್ಕೃತವೇ ರಾಷ್ಟ್ರಭಾಷೆಯಾಗಲೇ ಎಂಬ ಸಲಹೆ ಮುಂದಿಟ್ಟರು. ಅದಕ್ಕೆ ಅವರು ಕೊಟ್ಟ ಕಾರಣ:
‘‘ಹಿಂದಿ ರಾಷ್ಟ್ರಭಾಷೆಯಾದರೆ ಉಳಿದವರಿಗಿಂತ ಹಿಂದಿ ಭಾಷಿಕರಿಗೆ ಹೆಚ್ಚಿನ ಅನುಕೂಲ. ಇತರ ಭಾಷೆ ಅಧಿಕೃತ ಭಾಷೆಯಾದರೆ ಆ ಭಾಷಿಕರಿಗೆ ಅನುಕೂಲ. ಮಿಕ್ಕವರಿಗೆ ಅನನುಕೂಲ. ಆದರೆ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಅದು ಎಲ್ಲರಿಂದಲೂ ಸಮಾನ ದೂರ ಮತ್ತು ಎಲ್ಲರಿಗೂ ಸಮಾನವಾಗಿ ಅನನುಕೂಲ. ಇಂತಹ ಅನನುಕೂಲಕರ ಸಮಾನತೆಗಾಗಿ ಸಂಸ್ಕೃತ ರಾಷ್ಟ್ರಭಾಷೆಯಾಗಲಿ’’ ಎಂಬುದು ಅವರ ಹತಾಶ ವಾದವಾಗಿತ್ತು.
ಈ ಸಂದರ್ಭವೇ, ಅಂಬೇಡ್ಕರ್ ಹಾಗೂ ಇನ್ನಿತರರನ್ನು ಮೈತ್ರಾ ಅವರ ತಿದ್ದುಪಡಿಗೆ ಸಮರ್ಥನೆ ನೀಡುವ ಹತಾಶೆಗೆ ದೂಡಿತ್ತು ಎಂದು ಸಂವಿಧಾನ ರಚನಾ ಸಭೆಯ ಹಾಗೂ ಭಾರತದ ಪ್ರಜಾತಂತ್ರದ ಪ್ರಮುಖ ಚರಿತ್ರಕಾರ Granville Austin ಅವರು ದಾಖಲಿಸಿದ್ದಾರೆ.
ಅವರ ‘The Indian Constitution- Corner stone of a Nation ’ಎಂಬ ಪುಸ್ತಕದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಬಗ್ಗೆ ಹಾಗೂ ಅದರ ಹಿಂದೆ-ಮುಂದೆ ನಡೆದ ವಿದ್ಯಮಾನಗಳ ಚರಿತ್ರೆ ದಾಖಲಿಸಿರುವ ಆಸ್ಟಿನ್ ಅವರು ಅಂಬೇಡ್ಕರ್, ಮೈತ್ರಾ ಅವರ ಮನವಿಗೆ ಏಕೆ ಸಹಿ ಹಾಕಿದರು ಎಂಬ ಬಗ್ಗೆ ಈ ಉತ್ತರವನ್ನು ನೀಡುತ್ತಾರೆ:
‘‘The disgust and dismay with which many Assembly members by this time looked on the controversy was shown by the amendments that would have made Sanskrit the official language. Heading the list of twentyeight members who submitted such amendments were the names of Ambedkar and T. T. Krishnamachari. Neither could have believed that their amendment would be accepted, but they would have agreed with L. K. Maitra, who told the Assembly that choosing Sanskrit would put all the regional languages on an equal footing and put an end to the ‘jealousies’ aroused by the choice of Hindi.’’
(p. 301, "The Indian Constitution- Corner stone of a Nation" )
(ಈ ವಿಷಯದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹಲವಾರು ಸದಸ್ಯರಲ್ಲಿ ಎಂಥ ಹತಾಶೆ ಹಾಗೂ ಅಸಮಾಧಾನಗಳನ್ನು ಹುಟ್ಟಿಹಾಕಿತ್ತು ಎಂಬುದು ಸಂಸ್ಕೃತವನ್ನು ಅಧಿಕೃತ ಭಾಷೆ ಮಾಡಬೇಕೆಂಬ ತಿದ್ದುಪಡಿಯಲ್ಲಿ ವ್ಯಕ್ತವಾಗಿತ್ತು. ಆ ತಿದ್ದುಪಡಿಗೆ ಸಹಿಹಾಕಿದ ೨೮ ಸದಸ್ಯರಲ್ಲಿ ಮೇಲ್ಪಂಕ್ತಿಯಲ್ಲಿ ಇದ್ದ ಎರಡು ಹೆಸರುಗಳು ಅಂಬೇಡ್ಕರ್ ಮತ್ತು ಟಿ.ಟಿ. ಕೃಷ್ಣಮಾಚಾರಿ. ಈ ತಿದ್ದುಪಡಿಯನ್ನು ಸಭೆಯು ಅನುಮೋದಿಸುತ್ತದೆ ಎಂದು ಇವರಿಬ್ಬರು ನಂಬಿರಲಿಲ್ಲ. ಆದರೂ ಅವರು ಏಕೆ ಸಹಿ ಹಾಕಿದರೆಂದರೆ: ಮೈತ್ರಾ ಅವರು ಸಂವಿಧಾನ ಸಭೆಗೆ ತಿಳಿಸಿದಂತೆ ಸಂಸ್ಕೃತವನ್ನು ಆಯ್ದುಕೊಂಡರೆ ಅದು ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಸಮಾನ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತದೆ ಹಾಗೂ ಹಿಂದಿಯ ಆಯ್ಕೆ ಹುಟ್ಟುಹಾಕಿರುವ ಈರ್ಷೆಗೆ ಕೊನೆಹಾಡುತ್ತದೆ)
ಈ ಸಮಾನ ಅನನುಕೂಲತೆ ಹಾಗೂ ಬಗೆಹರಿಯದ ಚರ್ಚೆಗಳು ಹುಟ್ಟುಹಾಕಿದ ಹತಾಶೆಗಳಿಂದಾಗಿ ಅಂಬೇಡ್ಕರ್ ಮತ್ತಿತರರು ಮೈತ್ರಾ ಅವರು ಮುಂದಿಟ್ಟ ಸಂಸ್ಕೃತ ರಾಷ್ಟ್ರಭಾಷೆ ಪ್ರಸ್ತಾವಕ್ಕೆ ಸಹಿ ಹಾಕಿದರೇ ವಿನಾ ಸಂಘಪರಿವಾರ ಪ್ರಚಾರ ಮಾಡುತ್ತಿರುವಂತೆ ಭರತವಷರ್ದ ಸಂಸ್ಕೃತಿ ಅಥವಾ ಆರ್ಯ ಭಾಷೆಯೇ ದೇಶದ ಇತಿಹಾಸದ ಅಭಿವ್ಯಕ್ತಿ ಎಂಬ ಕಾರಣಕ್ಕಾಗಿ ಅಲ್ಲ.
ಅಂಬೇಡ್ಕರ್ ಆದಿಯಾಗಿ ಯಾರು ಕೂಡಾ ಈ ತಿದ್ದುಪಡಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿಯೇ ಅವರು ಯಾರೂ ಸಂಸ್ಕೃತ ದೇಶಭಾಷೆಯಾಗಬೇಕೆಂಬ ಚರ್ಚೆಯಲ್ಲೂ ಪಾಲ್ಗೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ...
ಇದನ್ನು ಪ್ರಸ್ತಾವಿಸಿದ ಮೈತ್ರಾ ಅವರೇ ಇದರ ಬಗ್ಗೆ ಗಂಭೀರವಾಗಿರಲಿಲ್ಲ. ಆದ್ದರಿಂದಲೇ ಅವಕಾಶ ಸಿಕ್ಕೊಡನೆ ಅವರು ತಮ್ಮ ತಿದ್ದುಪಡಿಯನ್ನು ವಾಪಸ್ ಪಡೆದುಕೊಂಡರು. ಹೀಗಾಗಿ, ಈಗಲಾದರೂ ಸಂಘಪರಿವಾರದವರು ಅಂಬೇಡ್ಕರ್ ಬಗ್ಗೆ ಸುಳ್ಳು ಪ್ರಚಾರವನ್ನು ಕೈಬಿಡಬೇಕು. ಮಾಜಿ ಮುಖ್ಯ ನ್ಯಾಯಾಧೀಶ ಬೋಬ್ಡೆಯವರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ.
ಅವರು ನಾಗಪುರಕ್ಕೆ ಮರಳಿ ವರ್ಷಗಳಾದವು!!