ಸೆ. 24ರಂದು ಕರಾವಳಿಯಲ್ಲಿ ಉತ್ತಮ ಮಳೆಯ ನಿರೀಕ್ಷೆ
ಉಡುಪಿ, ಸೆ.23: ರವಿವಾರದಿಂದ ಪ್ರಾರಂಭಗೊಂಡಿರುವ ಮಳೆ, ಮಂಗಳವಾರವೂ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಅದರಲ್ಲೂ ವಿಶೇಷ ವಾಗಿ ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ನ್ನು ಘೋಷಿಸಲಾಗಿದೆ.
ರವಿವಾರ ಪ್ರಾರಂಭಗೊಂಡಿರುವ ಮಳೆ ಇಂದು ಸಹ ಸಾಧಾರಣ ಪ್ರಮಾಣದಲ್ಲಿ ಸುರಿದಿದೆ. ನಾಳೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಉತ್ತರ ಕನ್ನಡದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಪಶ್ಚಿಮದ ಸಮುದ್ರದ ಮೇಲಿಂದ ಗಂಟೆಗೆ 35ರಿಂದ 45ಕಿ.ಮೀ. ವೇಗದ ಗಾಳಿ ಬೀಸುವ ನಿರೀಕ್ಷೆ ಇದ್ದು, ಸಮುದ್ರ ಪ್ರಕ್ಷುಬ್ಧಗೊಳ್ಳ ಲಿದೆ. ಹೀಗಾಗಿ ಮೀನುಗಾರರು, ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಉತ್ತಮ ಮಳೆ: ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 42.8ಮಿ.ಮೀ. ಮಳೆಯಾದ ವರದಿಗಳು ಬಂದಿವೆ.
ಬೈಂದೂರಿನಲ್ಲಿ ಅತ್ಯಧಿಕ 67ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 53.5ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 47.6ಮಿ.ಮೀ., ಕುಂದಾಪುರ ದಲ್ಲಿ 40.5, ಉಡುಪಿಯಲ್ಲಿ 36.3, ಕಾಪುವಿನಲ್ಲಿ 29.1 ಹಾಗೂ ಕಾರ್ಕಳದಲ್ಲಿ 24.6ಮಿ.ಮೀ. ಮಳೆಯಾದ ವರದಿಗಳು ಬಂದಿವೆ.