ಮಣಿಪಾಲ: ಸೆ.27ರಂದು ಕೆ.ಜೆ.ಬೇಬಿ ಸ್ಮರಣಾರ್ಥ ಪರ್ಯಾಯ ಶಿಕ್ಷಣಗೋಷ್ಠಿ
ಉಡುಪಿ, ಸೆ.25: ಬಹುಮುಖಿ ಪ್ರತಿಭೆಯ ಬರಹಗಾರ- ನಾಟಕಕಾರ- ಚಲನಚಿತ್ರ ನಿರ್ಮಾಪಕ ಮತ್ತು ಪರ್ಯಾಯ ಶಿಕ್ಷಣದ ಪ್ರಯೋಗಶೀಲ ಕೆ.ಜೆ.ಬೇಬಿ ಅವರ ಸ್ಮರಣಾರ್ಥ ಪರ್ಯಾಯ ಶಿಕ್ಷಣ ಗೋಷ್ಠಿ, ಸಾಕ್ಷ್ಯಚಿತ್ರ ಪ್ರದರ್ಶನ, ಆದಿವಾಸಿ ಗೀತೆಗಳ ಕುರಿತು ವಿಚಾರ ಸಂಕಿರಣವು ಸೆ.27ರ ಶುಕ್ರವಾರ ಮಣಿಪಾಲದಲ್ಲಿ ನಡೆಯಲಿದೆ.
ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮಾಹೆ ಮಣಿಪಾಲ, ಸಹೃದಯ ಸಂಗಮಮ್ ಮತ್ತು ಉಡುಪಿಯ ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರಗಳ ಸಹಯೋಗದಲ್ಲಿ ಗಾಂಧಿಯನ್ ಸೆಂಟರ್ನ ಸರ್ವೋದಯ ಸಭಾಂಗಣದಲ್ಲಿ ಅಪರಾಹ್ನ 2:45ಕ್ಕೆ ಆಯೋಜಿಸಲಾಗಿದೆ.
ವಿವಿಧ ಕ್ಷೇತ್ರಗಳ ತಜ್ಞರಾದ ಪ್ರೊ.ಕೆ.ಶಂಕರನ್, ಡಾ.ಹರಿ ಪಿ ಜಿ, ಅನಿತಾ ಇ. ಎ. , ವಕೀಲರಾದ ಸರಿಜಾ, ಮಿನಿ ಎಂ. ಆರ್., ಏಕ್ತಾರಾ, ಸುಧಿ ಎಸ್, ಡಾ.ಶ್ರೀಕುಮಾರ್, ಪ್ರೊ. ಮೋಹನಕುಮಾರ್ ವಿ, ಪ್ರೊ. ವರದೇಶ್ ಹಿರೇಗಂಗೆ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಕೆ.ಜೆ. ಬೇಬಿ ಅವರು ಕೇರಳದಲ್ಲಿ ಆದಿವಾಸಿ ಮಕ್ಕಳಿಗಾಗಿ ಕನವ ಎಂಬ ಶಾಲೆಯನ್ನು ಪ್ರಾರಂಭಿಸಿದ ಪ್ರಸಿದ್ಧ ಬರಹಗಾರ ಮತ್ತು ಶಿಕ್ಷಣದಲ್ಲಿ ಪ್ರಯೋಗಶೀಲರಾಗಿದ್ದವರು. ಇತ್ತೀಚೆಗೆ ನಿಧನರಾದ (ಸೆ.1, 2024) ಅವರ ಸ್ಮರಣಾರ್ಥ ಮಾಹೆಯ ಜಿಸಿಪಿಎಎಸ್ ಕಟ್ಟಡದ (ಫಾರ್ಚೂನ್ ವ್ಯಾಲಿ ವ್ಯೆ ಹತ್ತಿರ) 2ನೇ ಮಹಡಿಯ ಸರ್ವೋದಯ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಸಿಪಿಎಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.