ಉಡುಪಿ: ಜು.28ಕ್ಕೆ ಯಕ್ಷಗಾನದ ಕುಣಿತ ದಾಖಲೀಕರಣ
ಉಡುಪಿ: ಜು.28ಕ್ಕೆ ಯಕ್ಷಗಾನದ ಕುಣಿತ ದಾಖಲೀಕರಣ
ಉಡುಪಿ, ಜು.26: ನಗರದ ಎಂ.ಜಿ.ಎಂ ಕಾಲೇಜು ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಮಾಹೆಯ ಯಕ್ಷಗಾನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬಡಗುತಿಟ್ಟಿನ ಎರಡನೇ ವೇಷ ಮತ್ತು ಪುರುಷ ವೇಷಗಳ ಯುದ್ಧದ ಸಂದರ್ಭದ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಜು.28ರಂದು ನಡೆಯಲಿದೆ.
ಈ ಕಾರ್ಯಕ್ರಮವನ್ನು ಬೆಳಗ್ಗೆ 9 ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಉದ್ಘಾಟಿಸಲಿ ದ್ದಾರೆ. ಅಧ್ಯಕ್ಷತೆ ಯನ್ನು ಉಡುಪಿ ಜಿಲ್ಲಾ ಸ್ಕೌಟ್ ಗೈಡ್ಸ್ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ವಹಿಸಲಿರುವರು. ಯಕ್ಷಗಾನ ಬರಹಗಾರರಾದ ರಾಘವ ಶೆಟ್ಟಿ ಬೇಳೂರು, ಖ್ಯಾತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಹಾಗೂ ಯಕ್ಷಗಾನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿ ರುವರು.
ನಂತರ ನಡೆಯುವ ಪ್ರಾತ್ಯಕ್ಷಿಕೆಯಲ್ಲಿ ಹಿಮ್ಮೇಳದಲ್ಲಿ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಎನ್.ಜಿ. ಹೆಗಡೆ ಯಲ್ಲಾಪುರ, ರಾಕೇಶ್ ಮಲ್ಯ ಹಳ್ಳಾಡಿ ಭಾಗವಹಿಸಲಿರುವರು. ಮುಮ್ಮೇಳದಲ್ಲಿ ಕೋಟ ಸುರೇಶ್ ಬಂಗೇರ, ಪ್ರವೀಣ್ ಗಾಣಿಗ ಕೆಮ್ಮಣ್ಣು, ನರಾಡಿ ಭೋಜರಾಜ ಶೆಟ್ಟಿ, ಕೊಳಲಿ ಕೃಷ್ಣ ಶೆಟ್ಟಿ, ಆಜ್ರಿ ಗೋಪಾಲ ಗಾಣಿಗ, ಬೆದ್ರಾಡಿ ನರಸಿಂಹ ನಾಯ್ಕ ಭಾಗವಹಿ ಸುವರು.
ಪ್ರಾತ್ಯಕ್ಷಿಕೆಯಲ್ಲಿ ಕೃಷ್ಣಾರ್ಜುನ ಕಾಳಗ, ಕರ್ಣಾರ್ಜುನ ಕಾಳಗ ಹಾಗೂ ಸುಧನ್ವಾರ್ಜುನ ಕಾಳಗ ಮುಂತಾದ ಪ್ರಸಂಗಗಳ ಯುದ್ಧ ಸನ್ನಿವೇಶಗಳು ಮೂಡಿಬರಲಿವೆ. ಯಕ್ಷಗಾನ ಕೇಂದ್ರದ ಸಲಹಾಸಮಿತಿ ಸದಸ್ಯ ಪ್ರೊ. ಎಸ್. ವಿ.ಉದಯಕುಮಾರ್ ಶೆಟ್ಟಿ ಕಾರ್ಯಕ್ರಮದ ಸಂಯೋಜಕರಾಗಿರುವರು ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ.