ಜು. 29ಕ್ಕೆ ಕೊಲ್ಲೂರಿನಲ್ಲಿ ನಿಧಿ ಆಫ್ಕೆ ನಿಕಟ್
ಉಡುಪಿ: ಭವಿಷ್ಯ ನಿಧಿ ಸದಸ್ಯರ ಹಾಗೂ ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಹರಿಸಲು ಹಾಗೂ ಜಾಗೃತಿ ಮೂಡಿಸಲು ಹೊಸದಿಲ್ಲಿಯ ಭವಿಷ್ಯ ನಿಧಿ ಸಂಘಟನೆ ಪ್ರಧಾನ ಕಚೇರಿ ಪ್ರಾರಂಭಿಸಿದ ಜಿಲ್ಲಾ ಮಾಸಿಕ ಕಾರ್ಯಕ್ರಮ ‘ನಿಧಿ ಆಫ್ಕೆ ನಿಕಟ್/ಭವಿಷ್ಯ ನಿಧಿ ನಿಮ್ಮ ಹತ್ತಿರ’ ಜು.29ರಂದು ಬೆಳಗ್ಗೆ 11.30ರಿಂದ ಸಂಜೆ ೪ಗಂಟೆಯವರೆಗೆ ಕೊಲ್ಲೂರಿನಲ್ಲಿರುವ ಮೂಕಾಂಬಿಕಾ ದೇವಸ್ಥಾನದ ಪಾರ್ಕಿಂಗ್ ಬಳಿಯ ಮೂಕಾಂಬಿಕಾ ಸಭಾಭವನದಲ್ಲಿ ನಡೆಯಲಿದೆ.
ನಿಧಿ ಆಪ್ಕೆ ನಿಕಟ್ ಎಂಬುದು ತನ್ನ ಲಕ್ಷಾಂತರ ಚಂದಾದಾರರಿಗೆ ತನ್ನ ವಿವಿಧ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನವಾಗಿದೆ. ಇದು ಉದ್ಯೋಗದಾತರು ಹಾಗೂ ಉದ್ಯೋಗಿಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಇದು ಸದಸ್ಯರ ಕುಂದುಕೊರತೆ ಪರಿಹಾರ ಹಾಗೂ ಮಾಹಿತಿ ವಿನಿಮಯ ವೇದಿಕೆಯಾಗಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಆದ್ದರಿಂದ ಎಲ್ಲಾ ಪಿಎಫ್ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗ ದಾತರು, ಟ್ರೇಡ್ ಯೂನಿಯನ್ ಮುಖಂಡರು ಹಾಗೂ ಸದಸ್ಯರು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದು ಕೊಳ್ಳಬಹುದು ಎಂದು ಉಡುಪಿ ಕ್ಷೇತ್ರೀಯ ಕಾರ್ಯಾಲಯದ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.