ಸೌಕೂರು-ಕುಚ್ಚಟ್ಟು ಗ್ರಾಮಗಳ 8 ಮನೆಗಳು ಜಲಾವೃತ: ಎಸಿ, ತಹಶೀಲ್ದಾರ್ಗಳಿಂದ ಭೇಟಿ
ಕುಂದಾಪುರ, ಜು.4: ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೌಕೂರು ಸಮೀಪದ ಕುಚ್ಚಟ್ಟು ಎಂಬಲ್ಲಿ ಹೊಳೆದಂಡೆಯಿಂದ ನೀರು ನುಗ್ಗಿ ಸಮೀಪದ ಎಂಟು ಮನೆಗಳು ಜಲಾವೃತವಾಗಿದೆ.
ಸ್ಥಳಕ್ಕೆ ಅಧಿಕಾರಿಗಳು, ಗ್ರಾ.ಪಂ. ಪ್ರತಿನಿಧಿಗಳು ಭೇಟಿ ನೀಡಿದ್ದು ತುರ್ತು ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸೌಕೂರು ದೇವಳದಲ್ಲಿ ಕಾಳಜಿ (ಪುನರ್ವಸತಿ) ಕೇಂದ್ರ ತೆರೆಯಲಾಗಿದ್ದು ನೆರೆಯ ನೀರಿನ ಮಟ್ಟ ಏರಿದಲ್ಲಿ ಜನರನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಲಾಗಿದೆ.
ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀಎಸ್.ಆರ್., ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗುಲ್ವಾಡಿ ಗ್ರಾಪಂ ಪಿಡಿಓ ವನಿತಾ, ಗ್ರಾಮಲೆಕ್ಕಿಗ ಪ್ರಕಾಶ್, ಸದಸ್ಯರಾದ ಸುರೇಂದ್ರ ಶೆಟ್ಟಿ ಗುಲ್ವಾಡಿ, ಅಮೀರ್ ಹಂಝಾ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಇಶಾಮ್ ಗುಲ್ವಾಡಿ, ಸುಬ್ರಹ್ಮಣ್ಯ, ಮಹೇಶ್ ಪೂಜಾರಿ, ಮಹೇಂದ್ರ ಮೊದಲಾದವರು ಉಪಸ್ಥಿತರಿದ್ದು, ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.