ಸೆ.29ರಂದು ಬಿಜೆಪಿ ಮೋರ್ಚಾದಿಂದ ಬರಹಗಾರರ ಸಮ್ಮೇಳನ
ಉಡುಪಿ, ಸೆ.23: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕರಾವಳಿಯ ಸಾಹಿತಿಗಳು, ಕಲಾವಿದರು, ಲೇಖಕರು, ಕವಿಗಳು ಹಾಗೂ ಚುಟುಕು ಬರಹಗಾರರ ಸಮ್ಮೇಳನವೊಂದು ಸೆ.29ರಂದು ಕುಂಜಿಬೆಟ್ಟಿನ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನವನ್ನು ಬೆಳಗ್ಗೆ 10:00ಗಂಟೆಗೆ ಮೈಸೂರಿನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಉದ್ಘಾಟಿಸಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ಕುಮಾರ್ ಕುಂದಾಪುರ ಉಪಸ್ಥಿತರಿರುವರು ಎಂದರು.
ಸಮ್ಮೇಳನದಲ್ಲಿ ಎರಡು ಗೋಷ್ಠಿಗಳು ನಡೆಯಲಿವೆ. 11 ಗಂಟೆಗೆ ಬದಲಾದ ರಾಜಕಾರಣದಿಂದ ದಮನಗೊಳ್ಳುತ್ತಿರುವ ಹಿಂದೂಗಳ ಬದುಕು ಸಾಹಿತ್ಯ ಎಂಬ ಗೋಷ್ಠಿ ನಡೆಯಲಿದ್ದು, ಖ್ಯಾತ ಬರಹಗಾರ ಪ್ರೇಮ್ಶೇಖರ್ ಹಾಗೂ ತುಳು ಬರಹಗಾರ ದಯಾನಂದ ಕತ್ತಲ್ಸಾರ್ ಭಾಗವಹಿಸುವರು.
ಅದೇ ರೀತಿ 12ಗಂಟೆಗೆ ನಡೆಯುವ ಭಯೋತ್ಪಾದನೆಯಲ್ಲಿ ನಲುಗುತ್ತಿರುವ ಹಿಂದುತ್ವ ಎಂಬ ವಿಷಯದ ಕುರಿತ ಗೋಷ್ಠಿ ಯಲ್ಲಿ ಖ್ಯಾತ ವಾಗ್ಮಿ ಡಾ.ಆರತಿ ಬಿ.ವಿ. ಹಾಗೂ ಉಡುಪಿಯ ಸಂವೇದನಾ ಫೌಂಡೇಷನ್ನ ಸ್ಥಾಪಕ ಪ್ರಕಾಶ್ ಮಲ್ಪೆ ಪಾಲ್ಗೊಳ್ಳುವರು. ಚಿಕ್ಕಮಗಳೂರಿನ ತನ್ಮಯಿ ಸಮನ್ವಯಕಾರ ರಾಗಿರುವರು ಎಂದರು.
ಅಪರಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ರವೀಂದ್ರ ತಿಂಗಳಾಯ, ಸುರೇಂದ್ರ ಕುಲಾಲ್, ಭಾರತಿ ಚಂದ್ರಶೇಖರ್, ಅರುಣ್ ಬಾಣ ಕುಂದಾಪುರ ಹಾಗೂ ಆದರ್ಶ ನಾಯರಿ ಉಪಸ್ಥಿತರಿದ್ದರು.