5 ಸಾವಿರಕ್ಕೂ ಅಧಿಕ ಅಡಿಕೆ ಮರಗಳಿಗೆ ಹಾನಿ: ಪ್ರತಾಪ್ಚಂದ್ರ ಶೆಟ್ಟಿ ಭೇಟಿ
ಕುಂದಾಪುರ: ವಿಧಾನ ಪರಿಷತ್ನ ಮಾಜಿ ಸಭಾಪತಿ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಕುಳ್ಳುಂಜೆ, ರಟ್ಟಾಡಿ ಮುಂತಾದ ಸುಂಟರಗಾಳಿ ಪೀಡಿತ ಪ್ರದೇಶಕ್ಕೆ ಇಂದು ಭೇಟಿ ನೀಡಿದರು.
ಬುಧವಾರ ಬೆಳಗಿನ ವೇಳೆ ಬೀಸಿದ ಸುಂಟರಗಾಳಿಯಿಂದ ಅಮವಾಸೆಬೈಲು ಆಸುಪಾಸಿನ ಗ್ರಾಮಗಳಲ್ಲಿ ದೊಡ್ಡಮಟ್ಟದ ಹಾನಿ ಸಂಭವಿಸಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ರಟ್ಟಾಡಿ ವ್ಯಾಪ್ತಿಯೊಂದರಲ್ಲೇ ಐದು ಸಾವಿರಕ್ಕೂ ಅಧಿಕ ಅಡಿಕೆ ಮರ ಗಳು, ಎರಡು ಸಾವಿರದಷ್ಟು ರಬ್ಬರ್ ಮರಗಳು ಹಾಗೂ ನೂರಾರು ತೆಂಗಿನ ಮರಗಳಿಗೆ ಹಾನಿಯಾಗಿದ್ದು, ಹೆಚ್ಚಿನವು ಧರಾಶಾಹಿ ಯಾಗಿವೆ.
ಅಮಾಸೆಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪ ಸಂಭವಿಸುತ್ತಿರುವುದು ಇದೇ ಮೊದಲು ಎಂದು ಗ್ರಾಮಸ್ಥರು ನೊಂದು ನುಡಿದಿದ್ದಾರೆ. ಸ್ಥಳಕ್ಕೆ ಗ್ರಾಪಂ ಪಿಡಿಓ ಭೇಟಿ ನೀಡಿದ್ದು ಆದ ಹಾನಿಗಳ ಅಂದಾಜು ಲೆಕ್ಕಾಚಾರ ನಡೆಸುತಿದ್ದಾರೆ.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೆದೂರು ಸದಾನಂದ ಶೆಟ್ಟಿ, ಹಾಲಾಡಿ ಗ್ರಾಪಂ ಅಧ್ಯಕ್ಷ ಚೋರಾಡಿ ಅಶೋಕ ಶೆಟ್ಟಿ, ಮುಖಂಡರಾದ ಸದಾಶಿವ ಶೆಟ್ಟಿ ಶಂಕರ ನಾರಾಯಣ, ಅಜಿತ್ ರಟ್ಟಾಡಿ, ಸಂಪತ್ ಶೆಟ್ಟಿ ರಟ್ಟಾಡಿ, ಕೃಷ್ಣ ರಟ್ಟಾಡಿ ಜೊತೆಯಲ್ಲಿದ್ದರು.