ಕಾರ್ಕಳ: ನಮ್ಮ ನಾಡ ಒಕ್ಕೂಟದ ವತಿಯಿಂದ ಶಿಫಾ ಗೆ ಸನ್ಮಾನ
ಕಾರ್ಕಳ: ಹೆಬ್ರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಹೆಬ್ರಿ ಮಠದಬೆಟ್ಟು ಶಿಫಾ ಅವರನ್ನು ಮಂಗಳವಾರ ನಮ್ಮ ನಾಡ ಒಕ್ಕೂಟ (ರಿ) ಹೆಬ್ರಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಮಠದಬೆಟ್ಟು ನಿವಾಸದಲ್ಲಿ ಮಂಗಳವಾರ ಶಿಫಾ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಬೆಳ್ವೆ, 2023- 24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿ ಶಿಫಾ 625 ರಲ್ಲಿ 612ಅಂಕ ( ಶೇ.97.92% ) ಪಡೆದು ಹೆಬ್ರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಮಾಡಿರುವ ಸಾಧನೆ ಅಪೂರ್ವವಾಗಿದೆ. ಸಮಾಜಕ್ಕೆ ಮತ್ತು ಹೆಬ್ರಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ನಮ್ಮ ನಾಡ ಒಕ್ಕೂಟ ಶಿಫಾ ಅವರ ಶೈಕ್ಷಣಿಕ ಜೀವನಕ್ಕೆ ನಿರಂತರ ಸಹಾಯ ಮಾಡಲಿದೆ ಎಂದು ಹೇಳಿದರು.
ಸಮುದಾಯದ ಮಕ್ಕಳ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ನಮ್ಮ ನಾಡ ಒಕ್ಕೂಟ ಜಿಲ್ಲೆಯಾದ್ಯಂತ ಸಹಾಯ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಮಾಹಿತಿ ಶಿಬಿರವನ್ನು ಸಕಾಲ ಮಾಡುತ್ತ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಶಿಫಾ, ಕಲಿತು ಇನ್ನಷ್ಟು ಸಾಧನೆ ಮಾಡಿ ಸರ್ಕಾರದ ಉನ್ನತ ಅಧಿಕಾರಿಯಾಗಬೇಕು ಎಂಬ ಹಂಬಲವಿದೆ. ಆ ಮೂಲಕ ದೇಶ ಸಮಾಜದ ಮತ್ತು ಜನರ ಸೇವೆ ಮಾಡುವ ಇಚ್ಚೆ ಇದೆ. ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆ ಮಾಡಿದ ಹೆಮ್ಮೆ ಇದೆ. ನನಗೆ ಸಹಾಯ ಮಾರ್ಗದರ್ಶನ ಮಾಡಿದ, ಪೋಷಕರು, ಗುರುವೃಂದ ಹಾಗೂ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ವಿದ್ಯಾರ್ಥಿನಿಯ ತಂದೆ ತಾಯಿ ಹೆಬ್ರಿ ಮಠದ ಬೆಟ್ಟಿನ ಅನ್ವರ್ ರಫೀ ಹಾಗೂ ಆಯಿಶಾ ಬಾನು ಕೃತಜ್ಞತೆ ಸಲ್ಲಿಸಿದರು.
ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲ್, ಪ್ರಶಸ್ತಿ ಪುರಸ್ಕೃತ ಪತ್ರಕರ್ತ ನರೇಂದ್ರ ಎಸ್ ಮರಸಣಿಗೆ, ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ ಕೋಶಾಧಿಕಾರಿ ಅಬ್ದುಲ್ ಅಝೀಝ್ ಮುನಿಯಾಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರಾಫತ್ ಅಲ್ಬಾಡಿ, ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ರಯಾನ್, ಹೆಬ್ರಿ ಘಟಕದ ಸದಸ್ಯ ಜಿಫ್ರಿ ಸಾಹೇಬ್ ಬೆಳ್ವೆ, ಸ್ಥಳೀಯರಾದ ಮುಸ್ತಾಫಾ, ಹಸನಬ್ಬ ಮೊದಲಾದವರು ಉಪಸ್ಥಿರಿದ್ದರು.
ರಯಾನ್ ಕಿರಾಅತ್ ಪಠಿಸಿದರು, ಫಾರಿಸ್ ಸ್ವಾಗತಿಸಿದರು, ಜಾಸಿಮ್ ವಂದಿಸಿದರು, ಅರಾಫತ್ ನಿರೂಪಿಸಿದರು.