ಉಡುಪಿ: ಯಕ್ಷಗಾನ ವೇಷಭೂಷಣ, ಬಣ್ಣಗಾರಿಕೆ ಶಿಬಿರ ಸಮಾರೋಪ
ಉಡುಪಿ, ಮೇ15: ಇಂದ್ರಾಳಿಯ ಯಕ್ಷಗಾನ ಕೇಂದ್ರ ಒಂದು ವಾರ ಕಾಲ ಆಯೋಜಿಸಿದ ಯಕ್ಷಗಾನ ವೇಷಭೂಷಣ ಮತ್ತು ಬಣ್ಣಗಾರಿಕೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕೇದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿ.ಜಿ.ಶೆಟ್ಟಿ ಮಾತನಾಡಿ, ಯಕ್ಷಗಾನದ ಪಾರಂಪರಿಕ ಶೈಲಿಯ ಸಂರಕ್ಷಣೆಗೆ ಕೇಂದ್ರ ಅನುಪಮವಾದ ಕೊಡುಗೆ ಸಲ್ಲಿಸಿದೆ. ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರಗಳು ಎಲ್ಲಾ ಕಡೆ ನಡೆಯುತ್ತದೆ. ಆದರೆ ಇದೊಂದು ವಿಶಿಷ್ಟವಾದ ಶಿಬಿರ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ, ಈ ಶಿಬಿರದ ಆಯೋಜನೆಗೆ ಕಾರಣವಾದ ಪ್ರೇರಣೆ ಬಗ್ಗೆ ತಿಳಿಸಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರವನ್ನಿತ್ತರು.
ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯ ಭುವನಪ್ರಸಾದ್ ಹೆಗ್ಡೆ, ಮಂಜುನಾಥ ಮಯ್ಯ ಹಾಗೂ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.
ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಕೇಂದ್ರದ ಗುರುಗಳು, ಯಕ್ಷರಂಗದ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದ್ದರು.