ಸಮಾಜಮುಖಿ ನಡಿಗೆ - ನಡೆದು ನೋಡು ಕರ್ನಾಟಕ ಕಾರ್ಯಕ್ರಮ
ಕಾರ್ಕಳ, ಮೇ 16: ಭಾರತದಲ್ಲಿ ಅಂತರ್ಗತವಾಗಿರುವ ಸಂಸ್ಕೃತಿಯನ್ನು ಪ್ರವಾಸಿಯಾಗಿ ನೋಡುವುದಕ್ಕೂ, ನಾಡಿನ ಜನರೊಡನೆ ಬೆರೆತು ಅರಿಯುವ ಪಯಣಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ಕರ್ನಾಟಕ ಸರಕಾರದ ಬಂದರು ಮತ್ತು ಜಲ ಸಾರಿಗೆ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್ಪುರ ಹೇಳಿದ್ದಾರೆ.
ಬೆಂಗಳೂರಿನ ಸಮಾಜಮುಖಿ ಮಾಸಪತ್ರಿಕೆಯ ವತಿಯಿಂದ ಸಮಾಜಮುಖಿ ನಡಿಗೆ-ನಡೆದು ನೋಡು ಕರ್ನಾಟಕ ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯ ಕ್ರಮದಡಿ ಕರಾವಳಿ ಪರಿಸರದಲ್ಲಿ ನಡಿಗೆ-ಕಡಲಯಾನ ಎಂಬ ಯಾತ್ರೆ ಕಾರ್ಕಳದ ಶ್ರೀಭುವನೇಂದ್ರ ಕಾಲೇಜಿಗೆ ಇತ್ತೀಚೆಗೆ ಆಗಮಿಸಿದ ವೇಳೆ ಅವರು ಮಾತನಾಡುತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮಾಜಮುಖಿ ಪತ್ರಿಕೆಯ ಏಪ್ರಿಲ್ ತಿಂಗಳ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತ್ಯ -ಸಂಸ್ಕೃತಿ ಪರಿಚಾರಕ ರಾಮಾಂಜಿ ನಮ್ಮ ಭೂಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವನಿತಾ ಶೆಟ್ಟಿ ವಂದಿಸಿದರು.
ಇದೇ ವೇಳೆ ಕಾಲೇಜಿನ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ ಪುತ್ಥಳಿಗೆ ಮಾಲಾರ್ಪಣೆಗೈದು ಗೌರವ ಸಲ್ಲಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 35ಕ್ಕಿಂತಲೂ ಹೆಚ್ಚು ಜನರನ್ನು ಒಳಗೊಂಡ ಈ ತಂಡವು ಕಾಲೇಜಿನ ಇಂದ್ರಪ್ರಸ್ಥ ಯಕ್ಷಗಾನ ಮ್ಯೂಸಿಯಂ, ಕೋಟಿ ಚೆನ್ನಯ ಥೀಮ್ ಪಾರ್ಕ್, ಮಿಯಾರಿನ ಕೆನರಾ ಬ್ಯಾಂಕ್ ಪ್ರಾಯೋಜಿತ ಶಿಲ್ಪ ಕಲಾ ಕೆತ್ತನ ಕೇಂದ್ರ ಹಾಗೂ ಚತುರ್ಮುಖ ಬಸದಿ ಮುಂತಾದ ಸಾಂಸ್ಕೃತಿಕ ಸ್ಥಳಗಳನ್ನು ಸಂದರ್ಶಿಸಿ ಮಾಹಿತಿ ಪಡೆದುಕೊಂಡಿತು.