ಉಡುಪಿಯಲ್ಲಿ ವೈವಿಧ್ಯಮಯ ಮಾವು ಮೇಳ; ರೈತರಿಂದ ನೇರ ಖರೀದಿ
ಉಡುಪಿ, ಮೇ16: ಹಣ್ಣುಗಳ ರಾಜನೆಂದು ಕರೆಯಲಾಗುವ, ದೇಹಕ್ಕೆ ಪೌಷ್ಠಿಕತೆಯನ್ನು ಒದಗಿಸುವ ವೈವಿಧ್ಯಮಯ ತಳಿಗಳ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಇದೀಗ ಪ್ರಾರಂಭಗೊಂಡಿದೆ.
ಇಂದಿನಿಂದ (ಮೇ16) ಮೇ 10ರವರೆಗೆ ನಡೆಯುವ ಈ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಇಂದು ಸಂಜೆ ಉದ್ಘಾಟಿಸಿದರು. ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತಾದಕರ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಈ ಮಾವು ಮೇಳ ನಡೆಯುತ್ತಿದೆ.
ಕರ್ನಾಟಕದಲ್ಲಿ ವೈವಿಧ್ಯಮಯ ಮಾವಿನಹಣ್ಣುಗಳನ್ನು ಅತಿಹೆಚ್ಚು ಬೆಳೆಯುವ ರಾಮನಗರ ಜಿಲ್ಲೆಯ ಮಾವು ಉತ್ಪಾದಕ ರೈತರು ನೇರವಾಗಿ ಇಲ್ಲಿ ತಾವು ಸಾವಯವ ರೀತಿಯಲ್ಲಿ ಬೆಳೆದ, ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಈಗ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತಿದ್ದಾರೆ. ಇದರಲ್ಲಿ ಮಧ್ಯವರ್ತಿಗಳಾಗಲಿ, ದಲ್ಲಾಳಿಗಳ ಹಸ್ತಕ್ಷೇಪವಾಗಲಿ ಇರುವುದಿಲ್ಲ.
ರಾಮನಗರದ ಮಾವಿನಹಣ್ಣಿನ ಬೆಳೆಗಾರರು ತಾವು ಕಟ್ಟಿಕೊಂಡ ರೈತ ಉತ್ಪಾದಕರ ಸಂಸ್ಥೆಯ ಮೂಲಕ ಈ ಮಾವಿನ ಮೇಳದಲ್ಲಿ ಭಾಗವಹಿಸು ತಿದ್ದಾರೆ. ರಾಮನಗರ ಜಿಲ್ಲೆಯ 13 ಮಂದಿ ಮಾವು ಬೆಳೆಗಾರರು ಇಲ್ಲಿ ಸದ್ಯ 20 ಟನ್ ಮಾವನ್ನು ಮಾರಾಟಕ್ಕೆ ತಂದಿದ್ದು, ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಇನ್ನೂ 20 ಟನ್ ಮಾವಿನ ಹಣ್ಣನ್ನು ತರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಸಾವಯವ ಗೊಬ್ಬರ ಬಳಸಿ ಬೆಳೆದಿರುವ ನೈಸರ್ಗಿಕವಾಗಿ ಮಾಗಿಸಿರುವ 20ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲೀಗ ನಡೆದಿದೆ. ಇಂದು ಸಂಜೆಯ ವೇಳೆಗೆ 10ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ಇದರಲ್ಲಿ ರಾಮನಗರ ಜಿಲ್ಲೆಯಲ್ಲಿ ಬೆಳೆದ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಮಲ್ಲಿಕಾ, ಶುಗರ್ಬೇಬಿ (ಸಕ್ಕರೆಗುತ್ತಿ), ಬಂಗನ್ಪಲ್ಲಿ, ರತ್ನಗಿರಿ, ಕಾಲಾಪಾಡಿ, ಆಲ್ಪೋನ್ಸಾ ತಳಿಗಳ ಒಟ್ಟು 20 ಟನ್ ಮನಸೆಳೆ ಯುವ ಮಾವಿನಹಣ್ಣುಗಳು ಸದ್ಯ ಮಾವಿನ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಮಾವು ಮೇಳದಲ್ಲಿ ನಾಡಿನಾದ್ಯಂತ ಜನಪ್ರಿಯಗೊಂಡಿರುವ ಅಲ್ಫೋನ್ಸಾ ತಳಿ ಭಾರೀ ಆಕರ್ಷಣೆಯ ಕೇಂದ್ರವಾಗಿದೆ. ಪ್ರತಿಯೊಬ್ಬ ಬೆಳೆಗಾರರು ತಾವು ಬೆಳೆದ ಹಣ್ಣುಗಳನ್ನು ಆಕರ್ಷಕ ರೀತಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದು, ಆಕರ್ಷಕ ಬಣ್ಣ ಹಾಗೂ ಪರಿಮಳದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಮೇಳಕ್ಕೆ ಬಂದ ಜನರು ಅತಿಹೆಚ್ಚು ಈ ಹಣ್ಣುಗಳನ್ನು ಖರೀದಿಸುತಿದ್ದಾರೆ. ಕೆ.ಜಿ.ಗೆ 200ರೂ.ನಂತೆ ಇದು ಮಾರಾಟವಾಗುತ್ತಿದೆ.
ಶುಗರ್ಬೇಬಿ ತನ್ನ ಗಾತ್ರದ ಹಾಗೂ ಸಕ್ಕರೆಯಂತೆ ಸಿಹಿಯ ಮೂಲಕ ಎಲ್ಲರನ್ನು ಆಕರ್ಷಿಸುತಿದ್ದು ಇದು ಕೆ.ಜಿಗೆ 300ರೂ.ನಂತೆ ಮಾರಾಟವಾ ಗುತ್ತಿದೆ. ಸಿಂಧೂರ 100ರೂ.ಗೆ, ಮಲ್ಲಿಆ 200ರೂ.ಗೆ, ರಸಪೂರಿ 150, ಬಂಗನ್ಪಲ್ಲಿ 100ರೂ.ಗೆ ಮಾರಾಟವಾದರೆ ತೋತಾಪುರಿ ಕೆ.ಜಿಗೆ 50 ರೂ ಕನಿಷ್ಠ ದರವಾಗಿದೆ. ಇಮಾಮ್ ಪಸಂದ್ ತಳಿಯು ಕೆ.ಜಿಯೊಂದಕ್ಕೆ 400 ರೂ. ಇದ್ದು ಇದು ಮಾವಿನಲ್ಲೇ ಗರಿಷ್ಠ ದರದ ತಳಿಯಾಗಿದೆ.
ಇಳುವರಿ ಕುಸಿತ: ಈ ಬಾರಿ ಕಳೆದ ಐದಾರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಮಳೆಯೇ ಬೀಳದ ಕಾರಣ ಮಾವಿನ ಇಳುವರಿಯಲ್ಲಿ ಶೇ.50ರಿಂದ 70ರಷ್ಟು ಕುಸಿತ ಕಂಡಿದೆ ಎಂದು ರೈತರು ನೋವು ತೋಡಿಕೊಂಡರು. 18 ವರ್ಷದಿಂದ ರಾಜ್ಯಾದ್ಯಂತ ಮಾವಿನ ಮೇಳದಲ್ಲಿ ಭಾಗವಹಿಸಿರುವ ಮಾಗಡಿ ತಾಲೂಕು ಬಸವನಪಾಳ್ಯದ ಸಿದ್ಧರಾಜು ಆರು ಎಕರೆ ಯಲ್ಲಿ ಮಾವು ಬೆಳೆಯುತಿದ್ದು ಸಾಮಾನ್ಯಾವಾಗಿ 25ರಿಂದ 30 ಟನ್ ಬರುವ ಇಳುವರಿ ಈ ವರ್ಷ 4-5ಟನ್ಗೆ ಇಳಿದಿದೆ ಎಂದು ನೋವು ತೋಡಿಕೊಂಡರು.
ಅದೇ ರೀತಿ 25 ಎಕರೆ ಪ್ರದೇಶದಲ್ಲಿ ವಿವಿಧ ಮಾವು ಬೆಳೆಯುವ ರವಿಕುಮಾರ್ ಹಿಂದೆಲ್ಲಾ 70ರಿಂದ 100 ಟನ್ ಇಳುವರಿ ಪಡೆಯುತಿದ್ದರೆ ಈ ವರ್ಷ 25 ಟನ್ ಸಹ ಕೈಗೆ ಸಿಗುತ್ತಿಲ್ಲ ಎಂದರು. ಕಳೆದ 10 ವರ್ಷಗಳಿಂದ ತಾನು ವಿವಿಧ ಮಾವಿನ ಮೇಳಗಳಲ್ಲಿ ಭಾಗವಹಿಸುತಿದ್ದು, ಮಂಗಳೂರು ಮತ್ತು ಉಡುಪಿ ಮೇಳಗಳಲ್ಲಿ ಒಳ್ಳೆಯ ಬೇಡಿಕೆ ಇರುವ ಕಾರಣ ಬಂದಿರುವುದಾಗಿ ಹೇಳಿಕೊಂಡರು.
ಮಾವು ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಮಾವು ಮೇಳದಲ್ಲಿ ರೈತರು ನೇರವಾಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲಾಗಿದೆ. ಇಲ್ಲಿ ಮಾರಾಟವಾಗುತ್ತಿರುವ ಮಾವು ಸಾವಯವ ಪದ್ದತಿಯಲ್ಲಿ ಬೆಳೆದುದಾಗಿದ್ದು ರಾಸಾಯನಿಕಗಳನ್ನು ಬಳಕೆ ಮಾಡದೇ ಮಾಗಿಸಿ ಹಣ್ಣು ಮಾಡಲಾಗಿರುವ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಲಾಭ ಪಡೆದು ಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಾರ್ವಜನಿಕರೂ ಸಾಕಷ್ಟು ಸಂಖ್ಯೆಯಲ್ಲಿ ನೆರೆದು ಮಾವಿನ ಹಣ್ಣಿನ ಖರೀದಿಯ ಭರಾಟೆಯಲ್ಲಿದ್ದರು.