ಮಣಿಪಾಲ: ಕೆಎಂಸಿಯಲ್ಲಿ ಮಾನವ ಎದೆಹಾಲು ನಿಧಿ ಕೇಂದ್ರ ಉದ್ಘಾಟನೆ
ಮಣಿಪಾಲ: ಉಡುಪಿ ಜಿಲ್ಲೆಯ ಮೊದಲ ಮಾನವ ಎದೆಹಾಲು ನಿಧಿ ಕೇಂದ್ರ(ಹ್ಯೂಮನ್ ಬ್ರೆಸ್ಟ್ಮಿಲ್ಕ್ ಬ್ಯಾಂಕ್) ‘ಮಣಿಪಾಲ ಮಾತೃ-ಅಮೃತ್ ಮಿಲ್ಕ್ ಬ್ಯಾಂಕ್’ ಅನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಜಿ.ಎಸ್.ಮಮತಾ ದೇವಿ ಅವರು ಮಂಗಳವಾರ ಉದ್ಘಾಟಿಸಿದರು.
‘ಮಣಿಪಾಲ ಮಾತೃ-ಅಮೃತ್ ಮಿಲ್ಕ್ ಬ್ಯಾಂಕ್’ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಮಣಿಪಾಲ್ ಫೌಂಡೇಶನ್ ಪ್ರಾರಂಭಿಸಿದೆ. ಇದು ಉಡುಪಿ ಜಿಲ್ಲೆಯಲ್ಲೇ ಮೊದಲನೆಯದಾಗಿದೆ. ಮಿಲ್ಕ್ ಬ್ಯಾಂಕ್ ಮಣಿಪಾಲ ಕೆಎಂಸಿಯ ನವಜಾತಶಾಸ್ತ್ರ ವಿಭಾಗದಲ್ಲಿದ್ದು ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕದ ಮೂಲಕ ಚಿಕಿತ್ಸೆ ನೀಡವಿದೆ. ಹಲವು ಜಿಲ್ಲೆ ಹಾಗೂ ರಾಜ್ಯಗಳ ಅನಾರೋಗ್ಯ ಮತ್ತು ಪ್ರಸವಪೂರ್ವ ಶಿಶುಗಳಿಗೆ ಇಲ್ಲಿಂದ ಹಾಲು ಪೂರೈಸಲಾಗುತ್ತದೆ.
ಮಿಲ್ಕ್ ಬ್ಯಾಂಕ್ನ್ನು ಉದ್ಘಾಟಿಸಿ ಮಾತನಾಡಿದ ಮಮತಾದೇವಿ ಜಿ.ಎಸ್., ತಾಯಿಯ ಎದೆ ಹಾಲು ಶಿಶುಗಳಿಗೆ ಅಮೃತ ಅಥವಾ ಔಷಧವಿದ್ದಂತೆ. ನವಜಾತ ಶಿಶುಗಳು ತಮ್ಮ ಆರಂಭಿಕ ದಿನಗಳಲ್ಲಿ ಎದೆಹಾಲನ್ನು ಪಡೆಯುವುದು ನಿರ್ಣಾಯಕ ವಾಗಿದೆ. ಏಕೆಂದರೆ ಇದು ಶಿಶುಗಳ ಆರೋಗ್ಯ ವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದರಲ್ಲದೇ ಇಂಥ ಕೇಂದ್ರ ವನ್ನು ಮಣಿಪಾಲದಲ್ಲಿ ಪ್ರಾರಂಭಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ಶೈಕ್ಷಣಿಕ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ, ಸಮುದಾಯಕ್ಕೆ ನವೀನ ಯೋಜನೆಗಳನ್ನು ಪರಿಚಯಿಸುವಲ್ಲಿ ಕೆಎಂಸಿ ಸದಾ ಮುಂಚೂಣಿ ಯಲ್ಲಿದೆ. ಎಲ್ಲಾ ನವಜಾತ ಶಿಶುಗಳು ತಮ್ಮ ಆರಂಭಿಕ ದಿನಗಳಲ್ಲಿ ಎದೆ ಹಾಲಿನಲ್ಲಿ ಕಂಡುಬರುವ ಅಗತ್ಯವಾದ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಎದೆ ಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಜಿಲ್ಲೆಯ ನವಜಾತ ಶಿಶುಗಳಿಗೆ ಆರೋಗ್ಯಕರ ಆರಂಭವನ್ನು ನೀಡುವಲ್ಲಿ ಈ ಉಪಕ್ರಮದ ಮಹತ್ವವನ್ನು ಒತ್ತಿ ಹೇಳಿದರು. ತಾಯಿಯ ಹಾಲಿನಲ್ಲಿ ಕಂಡು ಬರುವ ಪ್ರಮುಖ ಪೋಷಕಾಂಶಗಳಿಂದ ಹೆಚ್ಚಿನ ಶಿಶುಗಳು ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಪ್ರಾರಂಭಿಸಲಾಗಿದೆ ಎಂದರು.
ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಮಾತನಾಡಿ, ನವಜಾತ ಶಿಶು ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆಯನ್ನು ನೀಡುವ ಪ್ರಯತ್ನವಾಗಿ ಇದನ್ನು ಪ್ರಾರಂಭಿಸಲಾಗಿದ್ದು, ಹ್ಯೂಮನ್ ಮಿಲ್ಕ್ ಬ್ಯಾಂಕ್ ಲಾಭರಹಿತ ಉಪಕ್ರಮವಾಗಿದೆ. ಹೆಚ್ಚಿನ ದಾನಿಗಳು ಮುಂದೆ ಬರುವಂತೆ ನಾವು ಮಾನವ ಹಾಲಿನ ಬ್ಯಾಂಕ್ಗಳ ಬಗ್ಗೆ ಸಮುದಾಯಕ್ಕೆ ಶಿಕ್ಷಣ ನೀಡಬೇಕಾಗಿದೆ ಎಂದರು.
ನವಜಾತಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ.ಶೀಲಾ ಮಥಾಯಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಣಿಪಾಲ್ ಮಾತೃ- ಅಮೃತ್ ಮಿಲ್ಕ್ ಬ್ಯಾಂಕ್, ಮಾನವ ಹಾಲು ಬ್ಯಾಂಕುಗಳ ಪ್ರಮಾಣಿತ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಕ್ರಿಯೆಯ ಮೂಲಕ ಸ್ವೀಕರಿಸುವ ಶಿಶುಗಳ ಬಳಕೆಗೆ ದಾನ ಮಾಡಿದ ಮಾನವ ಹಾಲು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ. ಕೆಎಂಸಿಯಲ್ಲಿ ನಾವು ಯಾವುದೇ ಹೆಚ್ಚುವರಿ ಹಾಲನ್ನು ಹಂಚಿಕೊಳ್ಳಲು ತಾಯಂದಿರಿಗೆ ಪ್ರೋತ್ಸಾಹಿಸುತ್ತೇವೆ. ಅದು ಪುಟ್ಟ ಅನಾರೋಗ್ಯ ಶಿಶುಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.
ಆರೋಗ್ಯವಂತ ಹಾಲುಣಿಸುವ ತಾಯಂದಿರು ತಮ್ಮ ಶಿಶುಗಳೊಂದಿಗೆ ದಾಖಲಾದವರು ಅಥವಾ ತಮ್ಮ ಶಿಶುಗಳ ವಾಡಿಕೆಯ ತಪಾಸಣೆಗಾಗಿ ಆಸ್ಪತ್ರೆಯ ಓಪಿಡಿಗೆ ಹಾಜರಾಗುವ ತಾಯಂದಿರು ಮಾನವ ಹಾಲನ್ನು ದಾನ ಮಾಡಬಹುದು. ಇದಕ್ಕಾಗಿ ಕೆಎಂಸಿಯ ಮಹಿಳಾ ಮತ್ತು ಮಕ್ಕಳ ಬ್ಲಾಕ್ನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ನಿರೂಪಿಸಿದ ಡಾ.ಶ್ರುತಿ ಕೆ.ಭಾರದ್ವಾಜ್ ತಿಳಿಸಿದರು.