ಕಾವ್ಯದ ಜೊತೆ ಪ್ರೀತಿ, ಪ್ರಣಯ ಸೇರಿ ಎಲ್ಲವೂ ಸಾಧ್ಯ: ರಘುನಂದನ
![ಕಾವ್ಯದ ಜೊತೆ ಪ್ರೀತಿ, ಪ್ರಣಯ ಸೇರಿ ಎಲ್ಲವೂ ಸಾಧ್ಯ: ರಘುನಂದನ ಕಾವ್ಯದ ಜೊತೆ ಪ್ರೀತಿ, ಪ್ರಣಯ ಸೇರಿ ಎಲ್ಲವೂ ಸಾಧ್ಯ: ರಘುನಂದನ](https://www.varthabharati.in/h-upload/2024/07/01/1274854-ud-ju1-kavya.webp)
ಉಡುಪಿ: ಕಾವ್ಯಕರ್ಮ ತುಂಬಾ ಸಲೀಸು ಎಂಬ ಭಾವನೆಯಿಂದ ಇಂದು ಹಲವರು ಕಾವ್ಯ ರಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಟ್ಟಾರೆ ಗೀಚುತ್ತಾ ಕಾವ್ಯಸೃಷ್ಟಿಯ ಗಾಂಭೀರ್ಯ ಕಡಿಮೆ ಆಗಿದೆ. ಭಾಷೆಯ ಪಾವಿತ್ರ್ಯದ ಹಂಗು ಇಲ್ಲದೆ ಉತ್ತಮ ಕಾವ್ಯ ಸೃಷ್ಟಿ ಸಾಧ್ಯ ಇಲ್ಲ ಎಂದು ರಂಗ ನಿರ್ದೇಶಕ, ಕವಿ ರಘುನಂದನ ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಆಶ್ರಯದಲ್ಲಿ ಮತ್ತು ಜಿ.ರಾಜಶೇಖರ್ ಫೌಂಡೇಶನ್ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ’ಕವಿ, ನಾಟಕಕಾರ ರಘುನಂದನರೊಂದಿಗೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಾವ್ಯದ ಜೊತೆ ಒಂದು ಆಫೇರ್ ಇಟ್ಟುಕೊಳ್ಳಬೇಕು. ಅದು ಆಳವಾಗಿ ಪ್ರೀತಿಸುವಂತೆ ಮಾಡಿ ಬಿಡುತ್ತದೆ. ನನಗೆ ಕಾವ್ಯ ಎಲ್ಲ ಸಂಕೀರ್ಣತೆಯ ಜೊತೆಯೇ ಒದಗಿ ಬರುವ ಅತ್ಯುತ್ತಮ ಅಭಿವ್ಯಕ್ತಿ. ಅದು ಎಷ್ಟೋ ಬಾರಿ ಸಾಕ್ಷಾತ್ಕಾರ ಅನ್ನಿಸಿದ್ದು ಸುಳ್ಳಲ್ಲ ಎಂದರು. ಅವರು ತಮ್ಮ ನಾನು ಸತ್ತ ಮೇಲೆ ಕವನಸಂಗ್ರಹದ ಹಲವು ಕವನಗಳನ್ನು ವಾಚಿಸಿ ವ್ಯಾಖ್ಯಾನಿಸಿದರು.
ಹಿರಿಯ ವಿಮರ್ಶಕ ಮುರಳಿಧರ ಉಪಾಧ್ಯ ಬೇಂದ್ರೆ, ಕಾವ್ಯ ಮಿಮಾಂಸೆ ಕುರಿತು ರಘುನಂದನ ಬರೆದ ತುಯ್ತವೆಲ್ಲ ನವ್ಯದತ್ತ ಪುಸ್ತಕ ಕುರಿತು ಮಾತಾಡಿದರು. ಹಿರಿಯ ಚಿಂತಕ ಕೆ.ಫಣಿರಾಜ್ ಸಂವಾದದಲ್ಲಿ ಪಾಲ್ಗೊಂಡರು. ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಿ.ಪಿ.ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.