ಉಡುಪಿ ಜಿಲ್ಲೆಯಾದ್ಯಂತ ಸತತ ಮಳೆ
ಉಡುಪಿ, ಜು.6: ಉಡುಪಿ ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದೆ. ಮಳೆಯೊಂದಿಗೆ ಗಾಳಿಯು ಇಲ್ಲದ ಕಾರಣ ನೆರೆಯ ಭೀತಿ ಇಲ್ಲವಾಗಿದೆ. ಹೀಗಾಗಿ ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಆದರೆ ಮಳೆ ಬಿಟ್ಟು ಬಿಟ್ಟು ನಿರಂತರವಾಗಿ ಸುರಿಯುತ್ತಿದೆ.
ಇಂದು ಬೆಳಗ್ಗೆ 9:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 93.4ಮಿ.ಮೀ. ಮಳೆಯಾ ಗಿದೆ. ಉಡುಪಿಯಲ್ಲಿ 117.7, ಹೆಬ್ರಿಯಲ್ಲಿ 107.7, ಬೈಂದೂರಿನಲ್ಲಿ 97.7, ಬ್ರಹ್ಮಾವರದಲ್ಲಿ 97.0, ಕಾರ್ಕಳದಲ್ಲಿ 87.7, ಕುಂದಾಪುರದಲ್ಲಿ 82.6 ಹಾಗೂ ಕಾಪುವಿನಲ್ಲಿ 77.4ಮಿ.ಮೀ. ಮಳೆಯಾಗಿದೆ.
ದಿನದಲ್ಲಿ ನಾಲ್ಕು ಮನೆ ಹಾನಿಯ ಪ್ರಕರಣ ವರದಿಯಾಗಿದ್ದು ಒಟ್ಟು 1.10 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರದ ಹಳನಾಡಿನ ವನಜ ದೇವಾಡಿಗರ ಮನೆ ಮೇಲೆ ಮರ ಬಿದ್ದು ಹಾನಿಯಾದರೆ, ಬೆಳ್ಳಾಲದಲ್ಲಿ ಸರೋಜ ಶೆಡ್ತಿ ಅವರ ಮನೆ ಮಳೆಯಿಂದ ಭಾಗಶ: ಹಾನಿಯಾಗಿದೆ.
ಕಾರ್ಕಳದ ಬೋಳ ಗ್ರಾಮದಲ್ಲಿ ನಾರಾಯಣ ಹರಿಜನ ಹಾಗೂ ಕಣಜಾರಿನ ಕಲ್ಯಾಣಿ ಇವರ ಮನೆಗೆ ತಲಾ 30000 ರೂ.ನಷ್ಟದ ಅಂದಾಜು ಮಾಡಲಾಗಿದೆ.