ಶಿರ್ವದಲ್ಲಿ ಸುಳಿಗಾಳಿ: ಮನೆ, ದೇವಳ, ಮಸೀದಿಗಳಿಗೆ ಹಾನಿ
ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಬೀಸಿದ ಸುಳಿಗಾಳಿ ಮಳೆಗೆ ಹಲವು ಮನೆಗಳು, ದೇವಸ್ಥಾನ ಹಾಗೂ ಮಸೀದಿಗಳಿಗೆ ಅಪಾರ ಹಾನಿ ಸಂಭವಿಸಿದೆ. ಇದರಿಂದ ಲಕ್ಷಾತರ ರೂ. ನಷ್ಟ ಉಂಟಾಗಿದೆ.
ಶಿರ್ವ ಶ್ರೀಸಿದ್ಧಿವಿನಾಯಕ ದೇವಸ್ಥಾನದ ದೊಡ್ಡ ನಾಲಫಲಕವೇ ಧರೆಶಾಯಿ ಯಾಗಿದೆ. ಹಲವಾರು ಮರಗಳು ಬಿದ್ದಿವೆ. ಬಂಟಕಲ್ಲು ಶ್ರೀದುರ್ಗಾ ಪರಮೇಶ್ವರೀ ಶಾಲೆಯ ಮಾಡಿನ ಮೇಲೆ ಮರದ ಗೆಲ್ಲು ಬಿದ್ದು, ಹಂಚುಗಳು, ಸಿಮೆಂಟ್ ಸೀಟ್ಗಳಿಗೆ ಹಾನಿಯಾಗಿವೆ.
ಶಿರ್ವ ಮಸೀದಿಯ ಪ್ರಾರ್ಥನಾ ಮಂದಿರದ ಸಮೀಪ ಇರುವ ವುಳೂ ಮಾಡುವ ಸ್ಥಳದ ಮೇಲ್ಛಾವಣಿ ಹಾರಿ ಹೋಗಿದೆ. ಧರ್ಮಗುರುಗಳ ಮನೆಯ ಮೇಲ್ಚಾವಣಿಯ ಹಂಚುಗಳು ಹಾರಿವೆ. ಮಸೀದಿಯ ಆಸುಪಾಸಿನ ಮನೆಗಳಿಗೆ ಅಪಾರ ಹಾನಿಯಾಗಿದೆ. ದೊಡ್ಡ ಮರಗಳು ಉರುಳಿವೆ.
ಮಸೀದಿ ಸಮಿಪದ ಗೂಡಂಗಡಿ ಬಿದ್ದಿದೆ. ಮಸೀದಿ ಆವರಣದಲ್ಲಿಯೇ ಅಂದಾಜು 10 ಲಕ್ಷಕ್ಕೂ ಅಧಿಕ ನಷ್ಠ ಸಂಭವಿಸಿದೆ ಎಂದು ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಜುಬೇರ್ ಅಹಮ್ಮದ್ ಅಲಿ, ಧರ್ಮಗುರು ಸಿರಾಜುದ್ಧೀನ್ ಝೈನಿ ತಿಳಿಸಿದ್ದಾರೆ.
ಗಾಳಿಮಳೆಗೆ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಕಟ್ಟಿಂಗೇರಿ ಅಂಗನವಾಡಿ ಬಳಿಯ ನಿವಾಸಿ ಹರೀಶ್ ಗುರುಕೃಪಾ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿ ಸಂಭವಿಸಿದೆ.