ಕಾಂಗ್ರೆಸ್ನಿಂದ ಹಿಂದೂ ಯುವಕರ ನೈತಿಕ ಸ್ಥೈರ್ಯ ಕುಗ್ಗಿಸುವ ಷಡ್ಯಂತ್ರ: ಎಸ್.ದತ್ತಾತ್ರಿ ಆರೋಪ

ಉಡುಪಿ, ಸೆ.14: ರಾಜ್ಯ ಕಾಂಗ್ರೆಸ್ ಸರಕಾರ ನಾಗಮಂಗಲ ಗಣಪತಿ ಸಂಘಟಕರ ಮೇಲೆ ಎಫ್ಐಆರ್ ದಾಖಲಿಸಿರುವುದು ಖಂಡನೀಯ. ಹಿಂದೂ ವಿಚಾರದಲ್ಲಿ ಹೋರಾಟ, ಮೆರವಣಿಗೆ ಮಾಡದಂತೆ ನೈತಿಕ ಸ್ಥೈರ್ಯ ಕುಗ್ಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಸಂಘಟನೆಯ ಅಧ್ಯಕ್ಷರನ್ನು ನಂಬರ್ ಒನ್ ಆರೋಪಿ ಮಾಡಲಾಗಿದೆ. ಸಂಘಟನೆಯ ಇತರ ಪದಾಧಿಕಾರಿಗಳನ್ನು ಎರಡರಿಂದ 25ನೇ ವರೆಗಿನ ಆರೋಪಿಗಳನ್ನಾಗಿ ಮಾಡಿದ್ದಾರೆ. ಅದೇ ಮೆರವಣಿಗೆ ಕಲ್ಲು ತೂರಾಟ ಮಾಡಿ ಹಿಂಸಾಚಾರ ನಡೆಸಿದವರನ್ನು 26, 27ನೇ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಅವರು ದೂರಿದರು.
ಗಣಪತಿ ಸಂಘಟಕರ ಮೇಲೆ ದಾಖಲಿಸಿರುವ ಎಫ್ ಐಆರ್ ಅನ್ನು ತಕ್ಷಣ ರದ್ದು ಮಾಡಬೇಕು. ಹಾನಿಗೊಳಗಾದ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕು. ತಪ್ಪಿತಸ್ಥರನ್ನು ತಕ್ಷಣವೇ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿ ಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲೇಶ್ ಶೆಟ್ಟಿ, ಸಹ ಸಂಯೋಜಕ ಶಂಕರ ಅಂಕದಕಟ್ಟೆ ಉಪಸ್ಥಿತರಿದ್ದರು.