ಸೀರತ್ ಅಭಿಯಾನ: ಹೂಡೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ
ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ ಸೀರತ್ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮವನ್ನು ಹೂಡೆಯ ಸಾಲಿಹಾತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಸನ್ಮಾರ್ಗ ವಾರ ಪತ್ರಿಕೆಯ ಪ್ರಧಾನ ಸಂಪಾದಕ ಎ.ಕೆ ಕುಕ್ಕಿಲ ಮಾತನಾಡಿ, ಪ್ರಸ್ತುತ ಯಾರ ಬಗ್ಗೆಯೂ ವಿಶ್ವಾಸ ಇಲ್ಲದ ಸಮಾಜದಲ್ಲಿ ಬದುಕುತ್ತಿದ್ದೇವೆ. ಮಾನವೀಯ ಕಳಕಳಿ ಇರುವ ಜನರು ಸಮಾಜದಲ್ಲಿ ಕಡಿಮೆ ಯಾಗುತ್ತಿದ್ದಾರೆ. ಭಿನ್ನಾಭಿಪ್ರಾಯಗಳು ಇದ್ದ ಹೊರತಾಗಿಯೂ ವಿರೋಧಿಗಳು ಕೂಡ ಪ್ರವಾದಿ ಅವರ ಮೇಲೆ ವಿಶ್ವಾಸ ಹೊಂದಿದ್ದರು ಎಂದು ಹೇಳಿದರು.
ಪ್ರವಾದಿ ಮುಸ್ಲಿಮೇತರೊಂದಿಗಿನ ಸಂಬಂಧ ಕೂಡ ಬಹಳಷ್ಟು ಉತ್ತಮ ವಾಗಿತ್ತು. ಮುಸ್ಲಿಮೇತರರ ನಂಬಿಕೆಗಳನ್ನು ನಿಂದಿಸ ಬಾರದು ಎಂದು ಇಸ್ಲಾಮ್ ಕಲಿಸುತ್ತದೆ. ವಿರೋಧಿಗಳು ಪ್ರವಾದಿರ ಮೇಲೆ ದಾಳಿ ಮಾಡಿ ಕಾಳಗ ನಡೆಸಿದಂತಹ ಸಂದರ್ಭ ಗಳಲ್ಲೇ ವಿಜಯ ಪ್ರಾಪ್ತಿಗೊಂಡರೂ ಅವರೆಂದು ಸೋತವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಿಲ್ಲ. ಬದಲಾಗಿ ಎಲ್ಲರನ್ನು ಸಾಮೂಹಿಕವಾಗಿ ಕ್ಷಮಿಸಿ ಬಿಟ್ಟರು ಎಂದು ಅವರು ಹೇಳಿದರು.
ನಿವೃತ್ತ ಅಧ್ಯಾಪಕ ಸುಧಾಕರ್ ಶೆಟ್ಟಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಪ್ರಸ್ತಾವಿಕವಾಗಿ ಮಾತನಾಡಿದರು. ಯಾಸೀನ್ ಕೋಡಿಬೆಂಗ್ರೆ ನಿರೂಪಿಸಿ, ವಂದಿಸಿದರು.