ತುಳುವರ ಸ್ವಾಭಿಮಾನ ಉಳಿಸಿ ಬೆಳೆಸಲು ಕಾರ್ಯಪ್ರವೃತ್ತರಾಗಬೇಕು: ಮುರಳೀಧರ ಉಪಾಧ್ಯ
ಉಡುಪಿ, ಸೆ.24: ತುಳು ಚಳುವಳಿ ಕನ್ನಡದ ವಿರುದ್ಧ ಚಳುವಳಿ ಅಲ್ಲ. ತುಳು ನಾಡ ಜನರ ಆತ್ಮ ನಿರ್ಭರ ಚಳುವಳಿ ಎಂಬು ದಾಗಿ ಎಸ್.ಯು. ಪಣಿಯಾಡಿ 1928ರಲ್ಲಿ ತುಳುವ ಮಹಾಸಭೆ ಸ್ಥಾಪನೆ ಮಾಡುವ ಸಂದರ್ಭ ದಲ್ಲಿ ಹೇಳಿದ್ದರು. ನಾವು ಕೂಡ ಇದೇ ಉದ್ದೇಶದಿಂದ ಕಾರ್ಯಪ್ರವೃತ್ತರಾದರೆ ತುಳುವರ ಸ್ವಾಭಿಮಾನವನ್ನು ಉಳಿಸಿ ಬೆಳೆಸಬಹುದು ಎಂದು ಹಿರಿಯ ಸಾಹಿತಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಹೇಳಿದ್ದಾರೆ.
ಅವರು ತುಳುವರ್ಲ್ಡ್ ಫೌಂಡೇಶನ್ ಮಂಗಳೂರು ವತಿಯಿಂದ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನಡೆದ ತುಳುವ ಚಳುವಳಿಯ ಹರಿಕಾರರಾದ ಎಸ್.ಯು.ಪಣಿಯಾಡಿ, ಪೊಳಲಿ ಸೀನಪ್ಪ ಹೆಗ್ಡೆ, ನಾರಾಯಣ ಕಿಲ್ಲೆ ಮೊದಲಾದವರು ಪ್ರಾರಂಭಿಸಿದ ತುಳುವ ಮಹಾಸಭೆಯ 96ನೇ ವರ್ಷದ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಫೌಂಡೇಶನ್ ನಿರ್ದೇಶಕ ಡಾ.ರಾಜೇಶ್ ಆಳ್ವ ಮಾತನಾಡಿ, ತುಳುವ ಮಹಾಸಭೆಯ ಶತಮಾನೋತ್ಸವ ವೇಳೆ 2028ರ ಸಂದರ್ಭದಲ್ಲಿ ಉಡುಪಿಯಲ್ಲಿ ವಿಶ್ವಮಟ್ಟದಲ್ಲಿ ತುಳುವ ಮಹಾಸಭೆಯನ್ನು ಮಾಡುವುದಾಗಿ ಈ ನಿಟ್ಟಿನಲ್ಲಿ ಈಗಲೇ ಕಾರ್ಯ ಪ್ರವೃತ್ತರಾಗಬೇಕೆಂದು ಅಭಿಪ್ರಾಯ ಪಟ್ಟರು.
ತುಳುವ ಮಹಾಸಭೆಯ ಪ್ರಥಮ ಸದಸ್ಯತ್ವವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್, ಹಿರಿಯ ತುಳು ಹೋರಾಟಗಾರ ಸಾಂಗ್ಲಿ ದಿವಾಕರ್ ಶೆಟ್ಟಿ ಅವರಿಗೆ ನೀಡಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಚಂದ್ರಹಾಸ ದೇವಾಡಿಗ ಮೂಡಬಿದ್ರೆ, ಈಶ್ವರ್ ಚಿತ್ಪಾಡಿ, ಗಂಗಾಧರ್ ಕಿದಿಯೂರು, ಎಸ್.ಎ.ಕೃಷ್ಣಯ್ಯ ಮೊದಲಾದವರು ಸದಸ್ಯತನ ಸ್ವೀಕರಿಸಿದರು.
ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ, ಉಪಾಧ್ಯಕ್ಷೆ ತಾರಾ ಆಚಾರ್ಯ ಮತ್ತು ಸದಸ್ಯೆ ಯಶೋಧ ಕೇಶವ್, ಮುರಳಿ ಉಪ್ಪಂಗಳ, ಗಿರೀಶ್ ಶೆಟ್ಟಿ, ರಾಮಕೃಷ್ಣ ಕೆ.ಎಂ., ಹೇಮಲತಾ ವರ್ಕಾಡಿ, ಸೌಕೇಶ್ ವಿ.ಎಸ್.ಕಟಪಾಡಿ, ಸಾಗರ್ ಎಸ್.ಭಂಡಾರಿ, ವತ್ಸಲ ಕೋಟ್ಯಾನ್, ಮಮತಾ ಎಸ್ ಶೆಟ್ಟಿ, ಸರೋಜಾ ಆರ್.ಶೆಣೈ, ಜ್ಯೋತಿ ಎಸ್.ದೇವಾಡಿಗ, ಸುಶೀಲ ಜಯಕರ, ಉಷಾ, ದಯಾಶಿನಿ, ತಾರಾ ಸತೀಶ್, ದಯಾನಂದ ಕಿದಿಯೂರು, ಸುಮಿತ್ರ ಕೆರೆಮಠ ಮೊದಲಾದವರು ಉಪಸ್ಥಿತರಿದ್ದರು.