ಕೋಡಿ: ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ
ಕುಂದಾಪುರ, ಸೆ.24: ಕೋಡಿ ಹಾಜಿ ಕೆ.ಮೊಹಿದ್ದೀನ್ ಬ್ಯಾರಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಗಂಗೊಳ್ಳಿ ಕರಾವಳಿ ಕಾವಲು ಆರಕ್ಷಕ ಠಾಣೆ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.
ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ಮಾತನಾಡಿ, ಕರಾವಳಿಯ ಉದ್ದಗಲಕ್ಕೂ ಈ ಮಾದಕ ವ್ಯಸನಗಳ ಹಾವಳಿ ಅತಿಯಾಗಿದೆ. ಬುದ್ದಿವಂತರ ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಕಾನೂನಿಗೆ ವಿರುದ್ಧವಾದ ಈ ಕೃತ್ಯಗಳು ನಿಜಕ್ಕೂ ತಲೆ ಬಗ್ಗಿಸುವಂತೆ ಮಾಡಿದೆ. ಈ ಕಾನೂನು ಬಾಹಿರ ಚಟುವಟಿಕೆಗಳ ತಡೆಗೆ ಭಾರತದ ಭಾವಿ ಪ್ರಜೆ ಗಳಾದ ವಿದ್ಯಾರ್ಥಿಗಳು ಸಹಕರಿಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ರೆಹಮಾನ್ ವಹಿಸಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇಸ್ರಾ ಭಾವನಾತ್ಮಕ ಹಾಡನ್ನು ಹಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶ್ವಿನಿ ಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲ ಶಬೀನಾ ಎಚ್. ಉಪಸ್ಥಿತರಿದ್ದರು.
ಸಭೆಯಲ್ಲಿ ಕರಾವಳಿ ಕಾವಲು ಠಾಣೆ ಆರಕ್ಷಕ ಸಿಬ್ಬಂದಿಗಳಾದ ಉದಯ್ ಗೌಡ, ನಾಗೇಶ್ ಮತ್ತು ಸುಧಾಕರ್ ಉಪಸ್ಥಿತರಿ ದ್ದರು. ದ್ವಿತೀಯ ವಿಜ್ಞಾನ ವಿದ್ಯಾರ್ಥಿನಿ ಶಾಝ್ಮಾ ಸ್ವಾಗತಿಸಿದರು. ಚೆನ್ನಮ್ಮ ವಂದಿಸಿದರು. ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.