ರಕ್ತದ ಕೊರತೆ ನೀಗಿಸಲು ಸ್ವಯಂ ಪ್ರೇರಿತ ರಕ್ತದಾನ ಪರಿಹಾರ: ಡಾ.ಶರತ್ ರಾವ್
ಉಡುಪಿ: ಮಾನವನ ರಕ್ತದ ಒಂದೊಂದು ಹನಿಯೂ ಅತ್ಯಂತ ಅಮೂಲ್ಯವಾಗಿದ್ದು ಜಗತ್ತಿನಲ್ಲಿ ಇದಕ್ಕೆ ಯಾವುದೇ ಪರ್ಯಾಯ ಪದಾರ್ಥಗಳು ಇದುವರೆಗೂ ಅನ್ವೇಷಣೆಯಾಗಿಲ್ಲ. ಇಂದು ಪ್ರತಿದಿನ ನೂರಾರು ಯೂನಿಟ್ ರಕ್ತದ ಅವಶ್ಯಕತೆ ಇದ್ದು ಇದಕ್ಕೆ ಸ್ವಯಂ ಪ್ರೇರಿತ ರಕ್ತದಾನವೇ ಪರಿಹಾರ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿ ಡಾ.ಶರತ್ ರಾವ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಮತ್ತು ಮಣಿಪಾಲ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್, ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರ, ಕೆಎಂಸಿ ಆಸ್ಪತ್ರೆ, ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಇವುಗಳ ಸಹಭಾಗಿತ್ವದಲ್ಲಿ ಮಣಿಪಾಲದ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಲಾದ ರಕ್ತದಾನ ಶಿಬಿರ, ಉಚಿತ ಹೃದಯ ಮತ್ತು ಆರೋಗ್ಯ ತಪಾಸಣೆ ಶಿಬಿರ, ಅಪಘಾತ ವಿಮಾ ಯೋಜನೆಯ ನೋಂದಣಿ ಹಾಗೂ ಆಧಾರ್ ತಿದ್ದುಪಡಿ ಕಾರ್ಯಗಾರ, ಗ್ಯಾರೇಜು ಕಾರ್ಮಿಕರ ಕೌಶಲ್ಯ ಉನ್ನತೀ ಕರಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ., ಗೌರವ ಸಲಹೆಗಾರ ರಾದ ಯಾದವ್ ಶೆಟ್ಟಿಗಾರ್, ಜಯ ಸುವರ್ಣ ಮತ್ತು ಉದಯ್ ಕಿರಣ್, ಉಪಾಧ್ಯಕ್ಷರುಗಳಾದ ರಾಜೇಶ್ ಜತ್ತನ್ ಮತ್ತು ವಿನಯ್ ಕುಮಾರ್ ಕಲ್ಮಾಡಿ, ಕಾಲೇಜಿನ ಪ್ರಾಂಶುಪಾಲ ಡಾ.ಕಾಂತರಾಜ್ ಎ.ಎನ್., ತರಬೇತಿ ಕೇಂದ್ರದ ರಿಜಿಸ್ಟರ್ ಡಾ.ಆಂಜಯ್ಯ, ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಶಮಿ ಶಾಸ್ತ್ರಿ, ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಶೆಟ್ಟಿ, ಭಾರತೀಯ ಅಂಚೆ ಇಲಾಖೆಯ ಅಧಿಕಾರಿ ಶಂಕರ್ ಲಮಾಣಿ, ಅಭಯ ಹಸ್ತದ ಅಧ್ಯಕ್ಷ ಸತೀಶ್ ಸಾಲಿ ಯಾನ್, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಕೇಶವ, ಮಾಜಿ ಚೇರ್ಮನ್ ಪುಂಡಲಿಕ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ವಿನಯ್ ಕುಮಾರ್ ಸ್ವಾಗತಿಸಿ ಸಂತೋಷ್ ಕುಮಾರ್ ವಂದಿಸಿದರು. ಮಂಜುನಾಥ್ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.