ರೆಡ್ಕ್ರಾಸ್ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ಉದ್ಘಾಟನೆ
ಉಡುಪಿ, ಅ.10: ಜೀವ ಉಳಿಸುವ ಪವಿತ್ರ ಕಾರ್ಯದಲ್ಲಿ ಪ್ರಥಮ ಚಿಕಿತ್ಸಾ ಪಾತ್ರ ಬಹು ದೊಡ್ಡದು. ಇದರ ಅರಿವು ವ್ಯಾಪಕ ವಾಗಿ ಮೂಡಿಸುವ ಆಗತ್ಯವಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ ಅತ್ಯಗತ್ಯ ಎಂದು ರೆಡ್ ಕ್ರಾಸ್ ರಾಜ್ಯ ಮಂಡಳಿಯ ಸದಸ್ಯ ವಿ.ಜಿ.ಶೆಟ್ಟಿ ಹೇಳಿದ್ದಾರೆ.
ಭಾರತಿಯ ರೆಡ್ ಕ್ರಾಸ್ ರಾಜ್ಯ ಶಾಖೆ, ಉಡುಪಿ ಜಿಲ್ಲಾ ರೆಡ್ಕ್ರಾಸ್ ಘಟಕ ಮತ್ತು ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ನಾರಾಯಣರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ರೆಡ್ಕ್ರಾಸ್ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಪ್ರಥಮ ಚಿಕಿತ್ಸೆಯ ಪ್ರಾಥಮಿಕ ವಿಷಯಗಳ ಬಗ್ಗೆ ಮಾತನಾಡಿದರು. ಜಿಲ್ಲಾ ರೆಡ್ಕ್ರಾಸ್ ಕಾರ್ಯದರ್ಶಿ ಗಣನಾಥ ಎ.ಕ್ಕಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ರೆಡ್ಕ್ರಾಸ್ ಖಜಾಂಚಿ ರಮಾದೇವಿ, ತ್ರಿಶಾ ಕಾಲೇಜಿನ ರೆಡ್ಕ್ರಾಸ್ ಸಂಯೋಜಕಿ ಚೇತನ ಸುನಿಲ್ ಉಪಸ್ಥಿತರಿದ್ದರು. ಪ್ರಥಮ ಚಿಕಿತ್ಸಾ ತರಬೇತುದಾರರಾಗಿ ಅಶ್ವಿನ್ ಕುಮಾರ್ ನೇತ್ರಾವತಿ ಪ್ರಾಯೋಗಿಕ ತರಬೇತಿ ನೀಡಿದರು. ವಿದ್ಯಾರ್ಥಿನಿ ಸ್ನೇಹ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯದ ಉಡುಪಿ ಜಿಲ್ಲಾ ಮಟ್ಟದ ವಿವಿಧ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.