ರಾಜು ಪೂಜಾರಿ ಜಯಗಳಿಸಿದಲ್ಲಿ ಕರಾವಳಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಮಂಜುನಾಥ್ ಭಂಡಾರಿ
ಉಡುಪಿ: ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಒಳ್ಳೆಯ ಅನುಭವ ಹೊಂದಿರುವ ಸರಳ ವ್ಯಕ್ತಿತ್ವದ ರಾಜ ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರುವ ಅವಕಾಶವಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಮುಂಚೂಣಿ ಘಟಕಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಮಹಿಳಾ ಮತದಾರರಿದ್ದು ಸರಕಾರದ ಸೌಲಭ್ಯಗಳನ್ನು ಪಡೆದವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮತದಾರರು ಪಕ್ಷದ ಅಭ್ಯರ್ಥಿ ಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ ಗ್ರಾಪಂಗಳಲ್ಲಿ ರಾಜಕೀಯ ಬೆಂಬಲಿಗರಿದ್ದು ಕಾರ್ಯಕರ್ತರು ಪರಿಣಾಮಕಾರಿ ಕೆಲಸ ಮಾಡಿದಲ್ಲಿ ಬದಲಾವಣೆ ಸಾಧ್ಯವಿದೆ.ಈ ನಿಟ್ಟಿನಲ್ಲಿ ಪಕ್ಷದ ವಿವಿಧ ಘಟಕಗಳು ಮತದಾರರನ್ನು ಸಂಪರ್ಕಿಸಿ ಸರಕಾರದ ಸೌಲಭ್ಯಗಳ ಮಾಹಿತಿ ನೀಡಬೇಕು ಎಂದರು.
ಜಿಲ್ಲಾಧ್ಯಕ್ಷ ಅಶೋಕ್ಕುಮಾರ್ ಕೊಡವೂರು ಮಾತನಾಡಿ, ಜಿಲ್ಲಾ ಕಾಂಗ್ರೆಸ್ನಿಂದ ಈಗಾಗಲೇ ವಿವಿಧ ಬ್ಲಾಕ್ಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಪಕ್ಷದ ಮುಖಂಡರು ಮತದಾರರನ್ನು ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಮತದಾರರಿಗೆ ಒಲವಿದೆ ಈ ಹಿನ್ನಲೆಯಲ್ಲಿ ನಮ್ಮ ಅಭ್ಯರ್ಥಿ ಜಯಗಳಿಸುವ ಅವಕಾಶ ಹೆಚ್ಚಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ವಕ್ತಾರ ಭಾಸ್ಕರರಾವ್ ಕಿದಿಯೂರು,ವಿವಿಧ ಘಟಕಗಳ ಅಧ್ಯಕ್ಷ ಹರೀಶ್ ಕಿಣಿ, ಅಣ್ಣಯ್ಯ ಸೇರಿಗಾರ್, ಗೀತಾ ವಾಗ್ಳೆ, ಹರೀಶ್ ಶೆಟ್ಟಿ ಪಾಂಗಾಳ, ಸೌರಭ್ ಬಳ್ಳಾಲ್, ಸರ್ಪುದ್ದೀನ್ ಶೇಕ್, ಆನಂದ್ ಪೂಜಾರಿ, ಶಶಿಧರ ಶೆಟ್ಟಿ ಎಲ್ಲೂರು, ಕಿಶೋರ ಕುಮಾರ್ ಎರ್ಮಾಳ್, ರೋಶನ್ ಶೆಟ್ಟಿ ಉಪಸ್ಥಿತರಿದ್ದರು.