ಮರಾಠಿ ಸಮುದಾಯವನ್ನು ಎಸ್ಟಿಯಿಂದ ಕೈಬಿಡಿ: ಶ್ಯಾಮರಾಜ್ ಬಿರ್ತಿ
ಉಡುಪಿ, ಅ.12: ನಾವು ದಲಿತರಲ್ಲಾ ಎಂದು ತಾವೇ ಒಪ್ಪಿಕೊಂಡಿರುವ... ಮರಾಠಿ ಸಮುದಾಯವನ್ನು ಈ ಕೂಡಲೇ ಪರಿಶಿಷ್ಟ ಪಂಗಡದ ಪಟ್ಟಿಯಿಂದ ಕೈ ಬಿಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.
ಸಂವಿಧಾನ ಜಾರಿಯಾದಾಗಿನಿಂದಲೂ ಈ ಸಮಾಜದಲ್ಲಿ ಸ್ಫರ್ಶ್ಯ ಜನಾಂಗವಾದ ಮರಾಠಿ ಸಮುದಾಯದವರು ಅಸ್ಪರ್ಶ್ಯ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಅನುಭವಿಸುತ್ತಾ ಬಂದಿದ್ದಾರೆ. ನಿಜವಾದ ಅಸ್ಪೃಶ್ಯರಾದ ಕೊರಗ ಸಮುದಾಯದೊಂದಿಗೆ ಸಮಾನವಾಗಿ ಶೆಡ್ಯೂಲ್ಡ್ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮರಾಠಿ ಜನಾಂಗದವರು ಕೊರಗ ರಿಗೆ ನಿಜವಾಗಿಯೂ ದಕ್ಕಬೇಕಾಗಿರುವ ಮೀಸಲಾತಿಯನ್ನು ಸಂಪೂರ್ಣ ಕಬಳಿಸಿಕೊಂಡು ಅನುಭವಿಸಿಕೊಂಡು ಬರುತ್ತಿ ದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗ ಉಮೇಶ ನಾಯ್ಕ ಎನ್ನುವ ಮರಾಠಿ ಸಮುದಾಯದ ಮುಖಂಡ ಸ್ವತಃ ನಾವು ದಲಿತರಲ್ಲಾ.. ನಮಗೂ ಅಂಬೇಡ್ಕರ್ಗೂ ಯಾವುದೇ ಸಂಬಂಧ ಇಲ್ಲ ಎಂದು ಒಪ್ಪಿಕೊಂಡು, ತಮ್ಮ ಇಡೀ ಮರಾಠಿ ಸಮುದಾಯದವರಿಗೆ ಅಂಬೇಡ್ಕರ್ರನ್ನು ತಿರಸ್ಕರಿಸುವಂತೆ ಕರೆನೀಡಿದ್ದು, ಇದು ಮರಾಠಿ ಜನಾಂಗ ಅಸ್ಪರ್ಶ್ಯರಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದವರು ಹೇಳಿದ್ದಾರೆ.
ಆದ್ದರಿಂದ ಈ ಕೂಡಲೇ ಅಂಬೇಡ್ಕರ್ ಕಲ್ಪಿಸಿಕೊಟ್ಟ ಮೀಸಲಾತಿ ಪಟ್ಟಿಯಿಂದ ಮರಾಠಿ ಸಮುದಾಯವನ್ನು ಕೈ ಬಿಡಬೇಕೆಂದು ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.