ಕುಂದಾಪುರದಲ್ಲಿ ಸ್ವಯಪ್ರೇರಿತ ರಕ್ತದಾನ ಶಿಬಿರ
ಕುಂದಾಪುರ, ಅ.17: ಕುಂದಾಪುರದ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವುಗಳ ಸಹಯೋಗದೊಂದಿಗೆ ಮಾಜಿ ಸಚಿವ ಪ್ರಮೋದ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಹೊಸ ಬಸ್ ನಿಲ್ದಾಣದ ಬಳಿಯ ಫೆರಿ ರಸ್ತೆಯ ರೋಟರಿ ಭವನದಲ್ಲಿ ಇಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ವನ್ನು ಹಮ್ಮಿಕೊಂಡಿತ್ತು.
ಶಿಬಿರವನ್ನು ಉದ್ಘಾಟಿಸಿದ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಾರ್ವಜನಿಕ ಜೀವನದಲ್ಲಿ ನಿಷ್ಠುರ ಇಲ್ಲದೆ, ವೈಯಕ್ತಿಕ ದ್ವೇಷ ಇಲ್ಲದ, ಯಾವುದೇ ಪಕ್ಷದಲ್ಲಿದ್ದರೂ ಇತರರನ್ನು ದ್ವೇಷಿಸದೇ ಇರುವ ವ್ಯಕ್ತಿತ್ವ ಪ್ರಮೋದ್ ಮಧ್ವರಾಜ್ರದ್ದು ಎಂದರು.
ಹುಟ್ಟುಹಬ್ಬದಂದು ಆಡಂಬರ, ದುಂದುವೆಚ್ಚದ ಬದಲು ಇಂತಹ ರಕ್ತದಾನ ಶಿಬಿರ ನಡೆಸುವುದು ಜನರ ಜೀವ ಉಳಿಸುವ ಕೆಲಸ. ಆದ್ದರಿಂದ ಪ್ರತೀವರ್ಷ ನಡೆಸುವ ಸಂಕಲ್ಪದಂತೆ ಇದೇ ಮಾದರಿ ಅನುಸರಿಸಲಾಗುತ್ತಿದೆ. ದಾನ ಎಂದೂ ಪ್ರಚಾರ ಕ್ಕಾಗಿ ಇರಬಾರದು ಎಂದರು.
ಕುಂದಾಪುರ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ, ಪುರಸಭೆ ಅಧ್ಯಕ್ಷ ಮೋಹನ್ದಾಸ್ ಶೆಣೈ, ಸರಕಾರಿ ಆಸ್ಪತ್ರೆಯ ಫಿಜಿಶಿ ಯನ್ ಡಾ.ನಾಗೇಶ್, ರೆಡ್ಕ್ರಾಸ್ನ ಸಭಾಪತಿ ಜಯಕರ ಶೆಟ್ಟಿ ಎಸ್., ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್ನ ಸತೀಶ್ ಸಾಲ್ಯಾನ್ ಮಣಿಪಾಲ್, ಹಂಗಳೂರು ಲಯನ್ಸ್ ಅಧ್ಯಕ್ಷ ರೋವನ್ ಡಿ’ ಕೋಸ್ತಾ, ಯುವ ಬಂಟರ ಸಂಘ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ತಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ ಹೇರಿಕುದ್ರು, ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾ ಅಧ್ಯಕ್ಷ ಸದಾನಂದ ಬಳ್ಕೂರು ಉಪಸ್ಥಿತರಿದ್ದರು.
ರಕ್ತದಾನಿಗಳಾದ ಪ್ರಶಾಂತ್ ತಲ್ಲೂರು, ಶರಣ್ ಸಂದೀಪ್ ಕೋಡಿ, ವಿಜಯ್ ಎಸ್. ಪೂಜಾರಿ ಕುಂದಾಪುರ ಇವರನ್ನು ಸಮ್ಮಾನಿಸಲಾಯಿತು. ವಿಶೇಷ ಚೇತನ ಕಲಾವಿದ ಗಣೇಶ ಪಂಜಿಮಾರು ರಚಿಸಿದ ಭಾವಚಿತ್ರವನ್ನು ಪ್ರಮೋದ್ ಅವರಿಗೆ ನೀಡಲಾಯಿತು. ನಾಗರಾಜ್, ಸಂಜನಾ ಭಟ್ಕಳ ಕಾರ್ಯಕ್ರಮ ನಿರ್ವಹಿಸಿದರು.