ಅಂಪಾರು ಮನೆ ಕಳವು ಪ್ರಕರಣ: ಅಪ್ರಾಪ್ತ ಬಾಲಕನ ಬಂಧನ
ಉಡುಪಿ, ಅ.23: ಅಂಪಾರು ಎಂಬಲ್ಲಿನ ಮನೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.
ಅಂಪಾರು ಗ್ರಾಮದ ಅಕ್ಕಯ್ಯ ಎಂಬವರು ತನ್ನ ಮಗಳೊಂದಿಗೆ ಅ.10ರಿಂದ ಅ.21ರವರೆಗೆ ದಸರಾ ರಜೆ ಪ್ರಯುಕ್ತ ತಾಯಿ ಮನೆಗೆ ತೆರಳಿದ್ದು, ವಾಪಾಸ್ಸು ಅಂಪಾರು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಠಾಣಾ ಎಸ್ಸೈಗಳಾದ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಆರೋಪಿ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 87,890ರೂ. ಮೌಲ್ಯದ ಎರಡು ಮೊಬೈಲ್ ಪೋನ್, 2500ರೂ. ನಗದು, ಒಂದು ಜೊತೆ ಕಿವಿ ಓಲೆ, ಸಣ್ಣ ಕಿವಿ ಓಲೆ, ಉಂಗುರ, ಬೆಳ್ಳಿಯ ದಪ್ಪಸರ, ಸಪೂರ ಸರ, ಉಂಗುರ, 5 ಕಾಲು ಉಂಗುರಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಾನೂನು ಸಂಘ ರ್ಷಕ್ಕೆ ಒಳಗಾದ ಬಾಲಕನನ್ನು ಮಾನ್ಯ ಬಾಲ ನ್ಯಾಯ ಮಂಡಳಿ ಉಡುಪಿರವರಲ್ಲಿ ಹಾಜರುಪಡಿಸಲಾಗಿದೆ.