ರಕ್ತದಾನವೇ ನಿಜವಾದ ದಾನ: ಡಾ.ಗಣನಾಥ ಎಕ್ಕಾರು
ಉಡುಪಿ, ಅ.25: ಯಾವುದೇ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠದಾನ ವಾಗಿದ್ದು, ಅಪಾಯದಲ್ಲಿರುವವರ ಅಮೂಲ್ಯ ಜೀವವನ್ನು ಉಳಿಸುವ ಪವಿತ್ರ ಕಾರ್ಯವಾಗಿದೆ ಎಂದು ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಹೇಳಿದ್ದಾರೆ.
ನಗರದ ಪೂರ್ಣಪ್ರಜ್ಞ ಕಾಲೇಜಿನ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಎನ್ಸಿಸಿ ಅರ್ಮಿ, ಎನ್ಸಿಸಿ ನೇವಿ, ರೇಂಜರ್ಸ್ ರೋಡ್, ರೋವರ್ಸ್, ಭಾರತೀಯ ರೆಡ್ಕ್ರಾಸ್ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ಘಟಕ, ಲಿಯೋ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ನ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತಾನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ವಹಿಸಿದ್ದರು. ಕುಂದಾಪುರ ರೆಡ್ಕ್ರಾಸ್ ಘಟಕದ ಸಭಾಪತಿ ಜಯಕರ ಶೆಟ್ಟಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ಯುವ ರೆಡ್ಕ್ರಾಸ್ ಸಂಯೋಜಕಿ ಅನುಷಾ ಕೆ. ಉಪಸ್ಥಿತರಿದ್ದರು. ಶಾಮ ಕೆ. ಸ್ವಾಗತಿಸಿ, ವಿದ್ಯಾರ್ಥಿನಿ ರತ್ನಶ್ರೀ ಕಾರ್ಯಕ್ರಮ ನಿರೂಪಿಸಿ, ಕ್ಷಮಾ ವಂದಿಸಿದರು.