‘ನನ್ನ ನಾಡು ನನ್ನ ಹಾಡು’ ಕನ್ನಡ ಹಾಡುಗಳ ಸ್ಪರ್ಧೆ
ಉಡುಪಿ, ಅ.26: ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182, ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಲಯನ್ಸ್ ಮತ್ತು ರೋಟರಿ ಸದಸ್ಯರು ಹಾಗೂ ಸಾರ್ವಜನಿಕರಿಗೆ ‘ನನ್ನ ನಾಡು ನನ್ನ ಹಾಡು’ ಉಡುಪಿ ಜಿಲ್ಲಾ ಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯ ಕ್ರಮ ಸಂಯೋಜಕ ನಂದ ಕಿಶೋರ್ ಕೆಮ್ಮಣ್ಣು, ಕಾರ್ಯಕ್ರಮದಲ್ಲಿ ಕೇವಲ ಕನ್ನಡ ಭಾಷೆಯ ಗೀತೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ಹಾಡ ಬಹುದು. ಮೊದಲು ಬಂದ 100 ಹಾಡುಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. 2-3 ನಿಮಿಷ ಅವಕಾಶ. ಯಾವುದೇ ಆ್ಯಪ್ ಬಳಸುವಂತಿಲ್ಲ ಎಂದರು.
ಸಾರ್ವಜನಿಕರು, ಲಯನ್ಸ್ ಮತ್ತು ರೋಟರಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಮೊದಲ ಸುತ್ತಿನಲ್ಲಿ ಸ್ಪರ್ಧಾಳು ಗಳು ತಮ್ಮ ಹಾಡಿನ ವಿಡಿಯೋ ಅಥವಾ ಆಡಿಯೋಗಳನ್ನು ವಾಟ್ಸಾಪ್ ಮೂಲಕ 7975243048 ಈ ಸಂಖ್ಯೆಗೆ ಕಳುಹಿ ಸಬೇಕು. ಸಾರ್ವಜನಿಕರು ನ.1,2, ಲಯನ್ಸ್ ಸದಸ್ಯರು ನ.3-4 ಮತ್ತು ರೋಟರಿ ಸದಸ್ಯರು ನ.5-6 ರೊಳಗೆ ತಮ್ಮ ಹಾಡಿನ ವಿಡಿಯೋ ಆಡಿಯೋ ಕಳುಹಿಸಬೇಕು.
ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿದ ಪ್ರತಿ ಗುಂಪಿನ 5 ಗಾಯಕರನ್ನು ಅಂತಿಮ ಸುತ್ತಿಗಾಗಿ ಆಯ್ಕೆ ಮಾಡಲಾಗುವುದು. ಅಂತಿಮ ಸುತ್ತಿನ ಸ್ಪರ್ಧೆ ನ.9ರಂದು ಅಜ್ಜರಕಾಡು ಟೌನ್ ಹಾಲ್ನಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಸ್ಪರ್ಧಾ ವಿಜೇತರಿಗೆ ಗಾನ ಸಾಮ್ರಾಟ್, ಗಾನ ಸಾರಥಿ, ಗಾನ ಸುರಭಿ ಬಿರುದು ನೀಡಿ ಸಮಾರೋಪದಲ್ಲಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಮುಕ್ತ ಶ್ರೀನಿವಾಸ ಭಟ್, ತೇಜಸ್ವಿನಿ ಅನಿಲ್ ರಾಜ್, ನಾಗಭೂಷಣ್ ಶೇಟ್, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.