ನೆರೆ ಬಂದರೆ ನಾವುಂದ, ಸಾಲ್ಬುಡ ಜನತೆಗೆ ನರಕ ದರ್ಶನ: ಸಂಪರ್ಕ ರಸ್ತೆ ಮುಳುಗಡೆ
ಆಹಾರ ಸಾಮಗ್ರಿ ತರಲೂ ದೋಣಿ
ಯೋಗೀಶ್ ಕುಂಭಾಸಿ
ಕುಂದಾಪುರ, ಜು.25: ಪ್ರತಿ ವರ್ಷ ಮಳೆಗಾಲ ಬಂದರೆ ಇಲ್ಲಿನ ಜನರಿಗೆ ಆತಂಕ ಶುರುವಾಗುತ್ತದೆ. ಹಿಡಿ ಉಪ್ಪು ಸಹಿತ, ಆಹಾರ ಸಾಮಗ್ರಿ ತರಲು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು, ಜನ-ಜಾನುವಾರುಗಳನ್ನು ದಾಟಿಸಲು ದೋಣಿಗಳನ್ನು ಇಟ್ಟಿರಬೇಕು. ವರ್ಷವಿಡೀ ಕಾಣುವ ಊರು ಮಳೆಗಾಲದಲ್ಲಿ ದ್ವೀಪದಂತಾಗುತ್ತದೆ.
ಇದು ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡದ ಜನರ ಸಮಸ್ಯೆ. ಸಾಲ್ಬುಡ, ಕುದ್ರು ಭಾಗದ ಗ್ರಾಮದ ಬಹುತೇಕರು ಕೃಷಿ ನೆಚ್ಚಿಕೊಂಡವರು. ಇವರು ಸಾಗುವಳಿ ಮಾಡುವ ನೂರಾರು ಎಕರೆ ಕೃಷಿ ಭೂಮಿ ಹಾಗೂ ತೋಟ ಗಳು ಪ್ರತಿವರ್ಷದ ಮಳೆಗಾಲದಲ್ಲೂ ಸಂಪೂರ್ಣ ಜಲಾವೃತವಾಗು ತ್ತದೆ. ನೆರೆ ಬಂದು ಇಳಿದು ಹೋಗುವ 4-5 ದಿನಗಳ ಕಾಲ ಜಲ ದಿಗ್ಬಂಧನಕ್ಕೆ ಒಳಗಾಗುವ ಇಲ್ಲಿನ ಜನರ ದೈನಂದಿನ ನಿತ್ಯ ಅಗತ್ಯಕ್ಕೆ ದೋಣಿಯನ್ನೇ ನೆಚ್ಚಿಕೊಳ್ಳಬೇಕು.
ಸಂಪರ್ಕ ರಸ್ತೆ ಮುಳುಗಡೆಯಾಗುವ ಕಾರಣ ಮನೆಯ ಅಗತ್ಯದ ಸಣ್ಣ ಸಣ್ಣ ವಸ್ತುಗಳನ್ನು ತರಲು ಹಾಗೂ ಮುಖ್ಯ ರಸ್ತೆಯ ಸಂಪರ್ಕಕ್ಕೂ ನಾವುಂದಕ್ಕೆ ಬರಬೇಕಾದ ಇವರು, ಕಿ.ಮೀ ದೂರವನ್ನು ನೀರಿನ ನಡುವೆ ದೋಣಿಯಲ್ಲಿ ಬರಬೇಕಾಗಿದೆ.
ಮಳೆಗಾಲದ ಅವಧಿಯಲ್ಲಿ ಅಕ್ಷರಶಃ ದ್ವೀಪವಾಗುವ ಸಾಲ್ಬುಡ ಗ್ರಾಮದಲ್ಲಿನ ಈ ಪರಿಸ್ಥಿತಿಗೆ ಕೇವಲ ಉಕ್ಕೇರುವ ನದಿಯ ನೀರು ಮಾತ್ರ ಕಾರಣವಲ್ಲ. ಗ್ರಾಮದ ಮಧ್ಯೆ ಹಾದು ಹೋಗಿರುವ ಕೊಂಕಣ ರೈಲ್ವೆ ಹಳಿಗಳು ಕಾರಣ ಎನ್ನುವುದು ಸ್ಥಳೀಯರ ಆರೋಪ.
ಹಳಿಗಳ ನಿರ್ಮಾಣದ ವೇಳೆ ಮಾಡಲಾದ ಮಣ್ಣು ದಿಣ್ಣೆಗಳ ನಡುವೆ ನೀರಿನ ಸುಗಮ ಹರಿಯುವಿಕೆಗೆ ಸೂಕ್ತ ವ್ಯವಸ್ಥೆ ಮಾಡದೆ ಇರುವುದರಿಂದಾಗಿ ಸಮುದ್ರ ಹಾಗೂ ನದಿ ಸೇರಬೇಕಾದ ನೀರು ಕೃಷಿ ಪ್ರದೇಶವನ್ನು ಸೇರಿಕೊಳ್ಳುತ್ತಿದೆ. ತಾಂತ್ರಿಕ ತಜ್ಞರ ಸಲಹೆ ಪಡೆದುಕೊಂಡು ನಮ್ಮೂರ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಾಲ್ಕೈದು ದಿನ ಜಲದಿಗ್ಭಂಧನ
ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ನೆರೆಯ ತೊಂದರೆಯನ್ನು ಅನುಭವಿಸುತ್ತಿರುವ ನಾವುಂದ ಗ್ರಾಮದ ಸಾಲ್ಬುಡ, ಕುದ್ರು ಭಾಗದ ನೂರಕ್ಕೂ ಅಧಿಕ ಮನೆಯವರಿಗೆ 4-5 ದಿನಗಳ ಕಾಲ ಮನೆ ಬಿಟ್ಟು ಹೊರ ಬರಲಾಗದ ದುಸ್ಥಿತಿ.
ಹಿಡಿ ಉಪ್ಪು, ದಿನಸಿ, ತರಕಾರಿ, ಸಹಿತ ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ತರಬೇಕಾದರೂ ಕೂಡ ದೋಣಿ ಅಗತ್ಯ. ತುಂಬಿ ಹರಿಯುವ ನೀರಿನ ನಡುವೆ ಜೀವ ಭಯದ ನಡುವೆ ಸಾಗಬೇಕು. ಇಲ್ಲಿಗೊಂದು ತೂಗು ಸೇತುವೆ ಮಾಡಿ ಕೊಡಿ ಎಂದು ಆಗ್ರಹಿಸುತ್ತಿದ್ದರೂ, ಸಮಸ್ಯೆಗೆ ಸ್ಪಂದನ ಸಿಕ್ಕಿಲ್ಲ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.
ಪ್ರತಿವರ್ಷ ಮಳೆಗಾಲದಲ್ಲಿ ನೆರೆಯ ನೀರಿನಲ್ಲಿ ಸಿಲುಕಿದ ಜಾನುವಾರುಗಳನ್ನು ಸ್ಥಳೀಯ ಯುವಕರು ರಕ್ಷಣೆ ಮಾಡುತ್ತಾರೆ. ಮನೆಗೆ ತೆರಳುವ ರಸ್ತೆ ಹಾಗೂ ಕಾಲ್ನಡಿಗೆಯ ದಾರಿಗಳಲ್ಲಿ ನೆರೆ ನೀರು ತುಂಬಿರುವುದರಿಂದಾಗಿ ಸ್ಥಳೀಯರು ಸಂಚಾರಕ್ಕಾಗಿ ದೋಣಿ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ.