ಬೈಂದೂರು: ಮನೆ ಬಾಗಿಲು ಮುರಿದು ಕಳವುಗೈದ ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಕುಂದಾಪುರ: ಮನೆಮಂದಿ ಯಕ್ಷಗಾನಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಕೊಠಡಿಯ ಕಪಾಟಿನಲ್ಲಿರಿಸಿದ್ದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣ, ನಗದು ಹಣ ಮತ್ತು ಲ್ಯಾಪ್ಟಾಪ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾ.30 ರಂದು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಮೂಲದವರಾದ ಯತಿರಾಜ್ ಉಪ್ಪುಂದ, ಮಹೇಶ್ ಯಳಜಿತ್, ಕಾರ್ತಿಕ್ ನಾಗೂರು ಎನ್ನುವ ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳು ಕಳವು ಮಾಡಿದ ಚಿನ್ನಾಭರಣ, ಲ್ಯಾಪ್ಟಾಪ್ ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ಗಳ ಸಹಿತ ಅಂದಾಜು ಸುಮಾರು 3 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೈಂದೂರು ತಾಲೂಕು ಉಪ್ಪುಂದ ಗ್ರಾಮದಲ್ಲಿ ಮಾ.10ರಂದು ರಾತ್ರಿ ಈ ಘಟನೆ ನಡೆದಿತ್ತು. ಜನಾರ್ದನ ಎಂಬವರು ಮನೆಗೆ ಬೀಗ ಹಾಕಿ ಸಮೀಪದಲ್ಲೇ ನಡೆಯುತಿದ್ದ ಯಕ್ಷಗಾನ ನೋಡಲು ಹೋಗಿದ್ದು, ವಾಪಾಸ್ಸಾದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೈಂದೂರು ವೃತ್ತ ನಿರೀಕ್ಷಕ ಸವಿತೃತೇಜ, ಪಿಎಸ್ಐಗಳಾದ ತಿಮ್ಮೇಶ್ ಬಿ.ಎನ್, ನವೀನ ಪಿ. ಬೋರಕರ ಮತ್ತು ಸಿಬ್ಬಂದಿಗಳಾದ ಚಿದಾನಂದ, ಮಾಳಪ್ಪ , ಪರಯ್ಯ ಮಠಪತಿ, ನವೀನ್, ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಗಳಾದ ರವೀಂದ್ರ, ಅಶೋಕ ರಾಥೋಡ್, ಶಂಕರ ಮತ್ತು ಚಂದ್ರ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.