ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತಾತ್ಮಕವಾಗಿ ಸಂಪೂರ್ಣ ಶವವಾಗಿದೆ: ಕೋಟ ಶ್ರೀನಿವಾಸ್ ಪೂಜಾರಿ

PC: x.com/KotasBJP
ಯಲ್ಲಾಪುರ: ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕದ ಸರಕಾರ ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ಶವವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಟೀಕಿಸಿದ್ದಾರೆ.
ಶುಕ್ರವಾರ ನಡೆದ ಜನಾಕ್ರೋಶ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಉದಯಗಿರಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಇಡಲಾಗಿದೆ. ಈ ಸರಕಾರ ಜೀವಂತ ಇಲ್ಲ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.
ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರ ಸಮಕ್ಷಮದಲ್ಲಿ ಕೋರ್ಟಿಗೆ ತರುವಾಗ ಅವನ ಹಣೆಗೆ ಮುತ್ತಿಟ್ಟಿದ್ದಾರೆ. ಸರಕಾರ ಏನು ಮಾಡುತ್ತಿದೆ? ಗೃಹ ಇಲಾಖೆ ಏನು ಮಾಡುತ್ತಿದೆ. ಪೊಲೀಸರ ಮೌನವೇಕೆ? ಎಲ್ಲಿದೆ ಕಾನೂನು ವ್ಯವಸ್ಥೆ? ಎಂದು ಪ್ರಶ್ನಿಸಿದರು.
ಐಜಿ ಬರ್ತಾರೆ ಎಂದು ಬಿಜೆಪಿ ಕಾರ್ಯಕರ್ತನನ್ನು ಕರೆದುಕೊಂಡು ಹೋಗಿ ಮೈ ಹುಡಿ ಮಾಡಿದರಂತೆ. ಅದ್ಯಾಕೆ ಎಂದು ಕೇಳಿದರೆ 40 ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದರಂತೆ. ಏನು ರಾಜ್ಯ ಇದು?. ರಾಜ್ಯದ ಒಂದು ಲಕ್ಷ ಪೊಲೀಸರಿಗೆ ಅನ್ಯಾಯ ಆದಾಗ ಬೀದಿಗಿಳಿದು ಪೊಲೀಸರಿಗೆ ನ್ಯಾಯ ಕೇಳಿದ್ದು ಬಿಜೆಪಿ ಎಂಬುದನ್ನು ಮರೆಯಬಾರದು ಎಂದರು.